ರಾಷ್ಟ್ರೀಯ

ಮೂರನೇ ಕ್ಲಾಸಿನಲ್ಲಿ ಶಾಲೆ ಬಿಟ್ಟಿದ್ದ ಕವಿಯ ಕವನಗಳೀಗ ವಿವಿ ಪಠ್ಯಪುಸ್ತಕದಲ್ಲಿದೆ!

Pinterest LinkedIn Tumblr

Haldhar_Nag

ಹಲ್ದಾರ್ ನಾಗ್ ಎಂಬ ಕವಿಯೊಬ್ಬರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಒಡಿಶಾ ಮೂಲದ 65ರ ಹರೆಯದ ಈ ಕವಿ ಕೋಸ್ಲಿ ಭಾಷಾ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪದ್ಮ ಪ್ರಶಸ್ತಿ ನೀಡಲಾಗಿದೆ.

ಒಡಿಶಾದ ಬಡ ಕುಟುಂಬವೊಂದರಲ್ಲಿ ಜನಿಸಿದ ನಾಗ್, ಅಪ್ಪ ತೀರಿಕೊಂಡ ನಂತರ ಶಾಲೆ ಬಿಡಬೇಕಾಗಿ ಬಂತು. ಅಪ್ಪ ತೀರಿಕೊಂಡಾಗ ನಾಗ್ ಅವರು ಮೂರನೇ ತರಗತಿಯಲ್ಲಿದ್ದರು.

ಮನೆಯ ಕಷ್ಟಗಳನ್ನು ಹೋಗಲಾಡಿಸುವುದಕ್ಕಾಗಿ ಶಾಲೆ ಬಿಟ್ಟ ನಾಗ್ ಹಲವಾರು ಕಡೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು. ಶಾಲೆಯೊಂದರಲ್ಲಿ ಪಾತ್ರೆ ತೊಳೆಯುವುದರಿಂದ ಹಿಡಿದು ಅಡುಗೆಯವನ ಕೆಲಸವನ್ನೂ ಮಾಡಿದರು. ಅನಂತರ ಶಾಲೆಯ ಪಕ್ಕದಲ್ಲಿಯೇ ಚಿಕ್ಕದೊಂದು ಅಂಗಡಿಯನ್ನೂ ತೆರೆದರು.

1990ರಲ್ಲಿ ಇವರು ಬರೆದ ಮೊದಲ ಕವನ ದೋದೋ ಬಾರ್‌ಗಚ್ (ಹಳೆಯ ಆಲದ ಮರ) ಅಲ್ಲಿನ ಸ್ಥಳೀಯ ಮ್ಯಾಗಜಿನ್‌ವೊಂದರಲ್ಲಿ ಪ್ರಕಟವಾಯಿತು. ಅಲ್ಲಿಂದ ನಾಗ್ ಹಿಂತಿರುಗಿ ನೋಡಲಿಲ್ಲ. ಪ್ರಕೃತಿ, ಸಮಾಜ, ಪುರಾಣ, ಧರ್ಮ ಎಲ್ಲ ವಿಷಯದ ಬಗ್ಗೆಯೂ ಅವರು ಬರೆಯುತ್ತಲೇ ಹೋದರು. ಒಡಿಶಾದಲ್ಲಿ ಅವರನ್ನು ಲೋಕ್ ಕಬೀ ರತ್ನಾ ಎಂದೇ ಕರೆಯಲಾಗುತ್ತದೆ,

ನಾಗ್ ಇಲ್ಲಿಯವರೆಗೆ ಬರೆದ ಎಲ್ಲ ಕವನಗಳು ಅವರಿಗೆ ಕಂಠಪಾಠವಾಗಿದೆ. ಬರೆದ ಕವನಗಳ ಹೆಸರು ಅಥವಾ ವಿಷಯವನ್ನು ಹೇಳಿದರೆ ಸಾಕು, ನಾಗ್ ಅದನ್ನು ನೆನಪಿಸಿಕೊಂಡು ಸರಾಗವಾಗಿ ಹಾಡಬಲ್ಲರು. ಇದೀಗ ಅವರು ಪ್ರತೀ ದಿನ ಮೂರ್ನಾಲ್ಕು ಕಾರ್ಯಕ್ರಮಗಳಲ್ಲಿ ಕವನ ವಾಚನ ಮಾಡಲು ಹೋಗುತ್ತಾರೆ.

ಮೂರನೇ ತರಗತಿಯಷ್ಟೇ ಓದಿರುವ ನಾಗ್ ಸಾಹಿತ್ಯ ಕ್ಷೇತ್ರದಲ್ಲಿ ನಿರೀಕ್ಷೆಯನ್ನು ಮೀರಿ ಸಾಧನೆಗೈದಿದ್ದಾರೆ. ನಾಗ್ ಅವರ ಸಮಗ್ರ ಕೃತಿ ಹಲ್ದಾರ್ ಗ್ರಂಥಬಾಲಿ-2ರ ಒಂದಷ್ಟು ಭಾಗ ಸಂಬಾಲ್‌ಪುರ್ ವಿವಿಯಲ್ಲಿ ಪಠ್ಯ ವಿಷಯವಾಗಲಿದೆ. ಇಷ್ಟೇ ಅಲ್ಲ ಈಗಾಗಲೇ 5 ವಿದ್ಯಾರ್ಥಿಗಳು ನಾಗ್ ಅವರ ಸಾಹಿತ್ಯ ಕೊಡುಗೆಗಳ ಬಗ್ಗೆ ಪಿಹೆಚ್‌ಡಿ ಸಂಶೋಧನಾ ಪ್ರಬಂಧವನ್ನೂ ಮಂಡಿಸಿದ್ದಾರೆ.

Write A Comment