ಪಠಾಣ್ ಕೋಟ್: ಪಾಕಿಸ್ತಾನಕ್ಕೆ ಈಗ ಒಂದು ರೀತಿಯಲ್ಲಿ ಮೋಹಿನಿ ಭಸ್ಮಾಸುರನ ಅವಸ್ಥೆ. ಏಕೆಂದರೆ, ಈಗ ಆ ದೇಶದ ಮಾಜಿ ರಾಜ ತಾಂತ್ರಿಕರೇ ಅಲ್ಲಿನ ಆಡಳಿತ ನಡೆಸುವವರ ಇಂಥ ಎಡಬಿಡಂಗಿ ನೀತಿಯನ್ನು ಬಯಲಿಗೆ ಎಳೆದಿದ್ದಾರೆ.
ಅಷ್ಟೇ ಸಾಲದು ಎಂಬಂತೆ ಈಗ ಪಠಾಣ್ ಕೋಟ್ಗೆ ಭೇಟಿ ನೀಡಿರುವ ಜಂಟಿ ತನಿಖಾ ತಂಡದ ಅಧಿಕಾರಿಗಳ ಸುರಕ್ಷತೆಗೆ ಅವರನ್ನು ಗುಂಡು ನಿರೋಧಕ ವಾಹನಗಳಲ್ಲಿ ಕರೆ ತಂದಿದ್ದರು.
ಇಲ್ಲಿನ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕರ ದಾಳಿ ಬಗ್ಗೆ ತನಿಖೆ ನಡೆಸಲು ಇಲ್ಲಿಗೆ ಬಂದಿರುವ ಪಾಕಿಸ್ತಾನದ ಜಂಟಿ ತನಿಖಾ ತಂಡದ (ಜೆಐಟಿ) ಮೇಲೆ ಪಾಕಿಸ್ತಾನದ ಇಸ್ಲಾಮಿಕ್ ಮೂಲಭೂತ ವಾದಿಗಳು ಹಾಗೂ ಇಲ್ಲಿರುವ ಅವರ ಬೆಂಬಲಿಗರು ಆಕ್ರಮಣ ನಡೆಸುವ ಬೆದರಿಕೆಯಿದೆ. ಈ ಹಿನ್ನೆಲೆಯಲ್ಲಿ ಜೆಐಟಿಗೆ ವಿಶೇಷ ಭದ್ರತೆ ನೀಡುವಂತೆ ಪಂಜಾಬ್ ಪೊಲೀಸರಿಗೆ ಕೇಂದ್ರ ಗೃಹಖಾತೆ ಪತ್ರ ಬರೆದಿದೆ.
ಗೃಹ ಖಾತೆ ಪತ್ರ
ವಾಯುನೆಲೆಗೆ ಭೇಟಿ ನೀಡಲು ಅವರಿಗೆ ಅನುಮತಿ ನೀಡುವ ಬಗ್ಗೆ ಭಾರಿ ರಾಜಕೀಯ ವಿವಾದ ಸೃಷ್ಟಿಸುತ್ತಲೇ ಜೆಐಟಿ ಭಾರತಕ್ಕೆ ಬರುತ್ತಿದ್ದಂತೆಯೇ ಗೃಹ ಖಾತೆ ಪೊಲೀಸರಿಗೆ ಈ ಬಗ್ಗೆ ಪತ್ರ ಬರೆದಿದೆ.
`ಭಾರತಕ್ಕೆ ಜೆಐಟಿ ಕಳಿಸುವುದು ಅಮೆರಿಕದ ನಿಲುವಿಗೆ ಬದ್ಧವಾದಂತೆ ಎಂದು ಭಾವಿಸಿರುವ ಪಾಕಿಸ್ತಾನದ ಇಸ್ಲಾಮ್ ಮೂಲಭೂತವಾದಿಗಳು ಹಾಗೂ ಇಲ್ಲಿನ ಅವರ ಬೆಂಬಲಿಗರಿಂದ ಜೆಐಟಿಗೆ ಅಪಾಯವಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಾಮರ್ಥ್ಯ ಇದೆ
`ಇಸ್ಲಾಮಿಕ್ ಮೂಲಭೂತ ವಾದಿಗಳು ಮತ್ತು ಅವರ ಬೆಂಬಲಿಗರಿಗೆ ಭಾರತದ ಒಳಗೆ ಆಕ್ರಮಣ ನಡೆಸುವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಿದೆ’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರ ತಲುಪುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಕೊನೆ ಗಳಿಗೆಯಲ್ಲಿ ಗುಂಡು ನಿರೋಧಕ ಮಿಟ್ಸುಬಿಶಿ ಮಾಂಟೆರೊ ಮತ್ತು ಟೊಯೋಟಾ ಫಾರ್ಚೂನರ್ ವಾಹನಗಳನ್ನು ಜೆಐಟಿ ಮತ್ತು ಎನ್ಐಎ ಅಧಿಕಾರಿಗಳಿಗೆ ಒದಗಿಸಿದ್ದಾರೆ.
ಗಡಿಭಾಗಕ್ಕೆ ಭೇಟಿ
ಜೆಐಟಿ ಮತ್ತು ಎನ್ಐಎ ಅಧಿಕಾರಿಗಳು ಭಾರತ ಪಾಕ್ ಗಡಿಗೂ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಗೆ ಈ ವಾಹನಗಳನ್ನು ಒದಗಿಸಲಾಗಿದೆ ಎಂದೂ ಹೇಳಲಾಗಿದೆ.
ಗೃಹ ಖಾತೆ ಕಳಿಸಿರುವ ಪತ್ರ `ಈಗ ಬಂದಿರುವ ಪಾಕ್ ಅಧಿಕಾರಿಗಳು ಭಾರತದ ಶತ್ರುಗಳಲ್ಲಿ ಭಾರತ ಭಯೋತ್ಪಾದಕರಿಂದ ಎದುರಿಸುತ್ತಿರುವಷ್ಟೆ ಬೆದರಿಕೆಯನ್ನು ಈ ತಂಡವೂ ಎದುರಿಸುತ್ತಿದೆ’ ಎಂಬರ್ಥದಲ್ಲಿದೆ. ಜೆಐಟಿಗೆ ಭಾರತಕ್ಕೆ ಬರಲು ಅವಕಾಶ ನೀಡಿದ್ದಕ್ಕೆ ಕಾಂಗ್ರೆಸ್ ಮತ್ತು ಎಎಪಿ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅಮೃತಸರಕ್ಕೆ ಆಗಮನ
`ಪಠಾಣ್ ಕೋಟ್ ವಾಯುನೆಲೆಯ ಪಕ್ಷಿನೋಟವನ್ನು ತಪ್ಪಿಸಲು ಜೆಐಟಿ ಆಗಮಿಸುವ ವಿಮಾನವನ್ನು ಅಮೃತಸರದ ವಾಣಿಜ್ಯ ವಿಮಾನ ನಿಲ್ದಾಣದಲ್ಲಿ ಇಳಿಸಲು ನಿರ್ಧರಿಸಲಾಗಿದೆ’ ಎಂದೂ ಪತ್ರ ಹೇಳಿದೆ.
ಜೆಐಟಿ ಬಂದಾಗ ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಸೇರಿದಂತೆ, ಯಾವೊಬ್ಬ ಪೊಲೀಸ್ ಉನ್ನತಾಧಿಕಾರಿಯೂ ವಿಮಾನ ನಿಲ್ದಾಣದಲ್ಲಿರುವುದಿಲ್ಲ.
ಅವಕಾಶ ಇಲ್ಲ
ಗುರುದಾಸ್ಪುರದ ಎಸ್ಪಿ ಸಲ್ವೀಂದರ್ ಸಿಂಗ್ ಅವರ ಅಡುಗೆಯವನಾದ ಮದನ್ ಗೋಪಾಲ್ ಮತ್ತು ಆಭರಣ ತಯಾರಕ ರಾಜೇಶ್ ವರ್ಮಾ ಜತೆ ಮಾತಾಡಲೂ ಜೆಐಟಿಗೆ ಅವಕಾಶ ನೀಡುವುದಿಲ್ಲ.
ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಎಸ್ಪಿ ಸಲ್ವೀಂದರ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಅವರ ಕಾರನ್ನು ಭಯೋತ್ಪಾದಕರು ಕೊಂಡೊಯ್ದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.