ನವದೆಹಲಿ: ಮರ್ಯಾದೆಯಿಂದ ಬಾಕಿ ಹಣವನ್ನು ತೀರಿಸಿ, ಇಲ್ಲವಾದರೆ ಕಠಿಣ ಕ್ರಮ ಎದುರಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯಾಗೆ ಎಚ್ಚರಿಕೆ ನೀಡಿದ್ದಾರೆ.
ಬ್ಯಾಂಕ್ ಗಳಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಿ, ಇಲ್ಲವಾದರೆ, ಸಾಲ ನೀಡಿರುವವರಿಂದ ಹಾಗೂ ತನಿಖಾ ಸಂಸ್ಥೆಗಳಿಂದ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಜೇಟ್ಲಿ, ಒಂದು ವೇಳೆ ಮಲ್ಯ ಬಾಕಿ ಹಣ ಪಾವತಿಗೆ ಮುಂದಾಗದಿದ್ದರೆ, ಬ್ಯಾಂಕ್ ಗಳು ಮಲ್ಯ ಒಡೆತನದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗುತ್ತವೆ ಎಂದು ಹೇಳಿದ್ದಾರೆ.
ಈ ಹಿಂದೆ ಜೇಟ್ಲಿ ಅವರು, ಮಲ್ಯ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಿಂತಿರುಗಿಸಬೇಕಾದ ಸಾಲದ ಬಾಕಿಯಲ್ಲಿ ಒಂದು ಪೈಸೆಯನ್ನೂ ಬಿಡದೇ ವಸೂಲಿ ಮಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ, ಮಲ್ಯಾಗೆ ಮರ್ಯಾದಿಯಾಗಿ ಬಾಕಿ ಹಣ ಪಾವತಿಸುವಂತೆ ಎಚ್ಚರಿಸಿದ್ದಾರೆ.
ಸದ್ಯ ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ 17 ಬ್ಯಾಂಕ್ ಗಳಿಂದ ರು.9 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ.