ತಿರುಪತಿ: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ದೇಗುಲದ ಪವಿತ್ರ ಕಲ್ಯಾಣಿಯಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬನ ಶವವೊಂದು ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ತಿರುಪತಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿ ಬಳಿ ಬಂದಿದ್ದ ಸಿಬ್ಬಂದಿಗಳಿಗೆ ವ್ಯಕ್ತಿಯೊಬ್ಬನ ಶವವೊಂದು ತೇಲುತ್ತಿರುವುದಾಗಿ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ವ್ಯಕ್ತಿಯ ಶವವನ್ನು ನದಿಯಿಂದ ಹೊರತೆಗೆದಿರುವ ಪೊಲೀಸರು, ವ್ಯಕ್ತಿ ಕಾಲು ಜಾರಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ವ್ಯಕ್ತಿ 30 ವರ್ಷದ ಅಂತರದಲ್ಲಿರಬಹುದು ಎಂದು ಶಂಕಿಸಿರುವ ಪೊಲೀಸರು, ಶವ ಪರೀಕ್ಷೆ ವೇಳೆ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ದೇಗುಲದಲ್ಲಿ ತೆಪ್ಪೋತ್ಸವ ಆಯೋಜಿಸಿರುವುದರಿಂದ ಭಕ್ತಾದಿಗಳ ಸುರಕ್ಷತೆಗಾಗಿ ಸಿಬ್ಬಂದಿಗಳು ಕಲ್ಯಾಣಿಯ ಸುತ್ತಲೂ ಹಾಕಿದ್ದ ಗ್ರಿಲ್ ಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದರು. ಇದೀಗ ಈ ಘಟನೆ ನಡೆದಿದೆ. ಕಳೆದ 3 ವರ್ಷಗಳಲ್ಲಿ ಇದೇ ಮೊದಲ ಘಟನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಭಕ್ತಾದಿಗಳು ಕೊಳದಲ್ಲಿ ಸ್ನಾನ ಮಾಡಲು ದೇಗುಲದ ಸಿಬ್ಬಂದಿಗಳು ನಿಷೇಧ ಹೇರಿದ್ದಾರೆ. ಅಲ್ಲದೆ, ಕಲ್ಯಾಣಿಗೆ ಕೆಲವು ಆಚರಣೆ ಹಾಗೂ ವಿಶೇಷ ಪೂಜೆಗಳನ್ನು ನಡೆಸಬೇಕಿರುವುದರಿಂದ ಪೂಜೆ ಬಳಿಕ ಸ್ನಾನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.