ರಂಗಪಾರ (ಅಸ್ಸಾಮ್): ಅಸ್ಸಾಮಿನಾದ್ಯಂತ ಬೀಸುತ್ತಿರುವ ಬದಲಾವಣೆಯ ಚಂಡಮಾರುತವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಳುವ ಕಾಂಗ್ರೆಸ್ ಪಕ್ಷವನ್ನು ಬುಡಮೇಲು ಗೊಳಿಸಲು ಸಜ್ಜಾಗಿದೆ ಎಂದು ಭಾನುವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರವಾಗಿ ನಿರ್ಣಾಯಕ ಜನಾದೇಶ ನೀಡುವಂತೆ ಜನತೆಗೆ ಮನವಿ ಮಾಡಿದರು.
ಬ್ರಹ್ಮಪುತ್ರ ನದಿ ದಂಡೆಯ ಉತ್ತರ ಭಾಗದಲ್ಲಿನ ಅಸ್ಸಾಮಿನ ಸೋನಿತಪುರ ಜಿಲ್ಲೆಯ ರಂಗಪಾರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಏಪ್ರಿಲ್ 4 ಮತ್ತು 11ರಂದು ಅಸ್ಸಾಮ್ ವಿಧಾನಸಭೆಯ 126 ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ.
‘ಈದಿನ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಏರ್ಪಾಡಾಗಿದೆ. ಇಷ್ಟು ಬೆಳಗ್ಗೆ ಜನ ಹೇಗೆ ಬರುತ್ತಾರೋ ಎಂದು ನನಗೆ ಅಚ್ಚರಿಯಾಗಿತ್ತು. ಇಲ್ಲಿ ಈಗ ನೋಡಿದರೆ ರಸ್ತೆಗಳೇ ಕಾಣಿಸುತ್ತಿಲ್ಲ. ಇಂತಹ ಭಾರಿ ಜನಸ್ತೋಮ ನೋಡಲು ನನಗೆ ಖುಷಿಯಾಗುತ್ತಿದೆ. ಅಭಿವೃದ್ಧಿ ಕೆಲಸಗಳ ಮೂಲಕ ನಿಮ್ಮ ಈ ಪ್ರೀತಿಯನ್ನು ಬಡ್ಡಿ ಸಹಿತವಾಗಿ ಹಿಂತಿರುಗಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ಮೋದಿ ಹೇಳಿದರು.