ನವದೆಹಲಿ: ಈ ಯುವರಾಜ ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ಸಿಂಗ್ ಅಲ್ಲ. ಇಲ್ಲಿನ ವಿಸ್ತಾರವಾದ ಪುಸಾ ಕ್ಯಾಂಪಸ್ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಉದ್ಘಾಟಿಸಿದ `ಕೃಷಿ ಉನ್ನತಿ ಮೇಳ’ದಲ್ಲಿರುವ `ಯುವರಾಜ’ ಎಂಬ ಭಾರಿ ಗಾತ್ರದ ಕೋಣ!
ದೇಶಾದ್ಯಂತ ಇರುವ ಸಾವಿರಾರು ರೈತರು ಯುವರಾಜನ ದೊಡ್ಡಿಗೆ ಎಡತಾಕುತ್ತಿದ್ದಾರೆ. ಈ ಮುದ್ರಾ ತಳಿಯ ಕೋಣದ ಹೆಮ್ಮೆಯ ಮಾಲೀಕ ಕರಮ್ವೀರ್ ಸಿಂಗ್. ಅವನ ಬಳಿ ಬರುವ ರೈತರು ಯುವರಾಜನ ವೀರ್ಯಕ್ಕಾಗಿ ಅಂಗಲಾಚುತ್ತಾರೆ.
ಇವರೆಲ್ಲರನ್ನೂ ಕುರುಕ್ಷೇತ್ರದಲ್ಲಿರುವ ಕರಮ್ವೀರ್ನ ವೀರ್ಯ ಸಂರಕ್ಷಣಾ ಕೇಂದ್ರಕ್ಕೆ ಕಳಿಸಲಾಗುತ್ತದೆ.
ಯುವರಾಜ ಒಮ್ಮೆ ಸ್ಖಲಿಸಿದರೆ 4 ರಿಂದ 6 ಎಂಎಲ್ ವೀರ್ಯ ಸಂಗ್ರಹವಾಗುತ್ತದೆ. ನಂತರ ಅದನ್ನು ದುರ್ಬಲಗೊಳಿಸಿ 500 ರಿಂದ 600 ಡೋಸ್ಗಳಾಗಿ ಪರಿವರ್ತಿಸಲಾಗುತ್ತದೆ.
ಪ್ರತಿ ಡೋಸ್ನ್ನು ಕರಮ್ವೀರ್ 300 ರೂ.ಗಳಿಗೆ ಮಾರುತ್ತಾನೆ. ಇದರಿಂದ ಅವನ ಸಂಪಾದನೆ ವರ್ಷಕ್ಕೆ 45 ಲಕ್ಷ ರೂ. ಆದರೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಕರಮ್ವೀರ್, ಕೋಣದ ಆಹಾರ ಮತ್ತು ಆರೈಕೆಗಾಗಿಯೇ ವೆಚ್ಚ ಮಾಡುತ್ತಾನೆ!