ನವದೆಹಲಿ: ಜಮ್ಮು – ಕಾಶ್ಮೀರದಲ್ಲಿ ಪಿಡಿಪಿ, ಬಿಜೆಪಿ ಸರ್ಕಾರ ರಚನೆಯ ಬಿಕ್ಕಟ್ಟು ತಾರಕಕ್ಕೇರಿದ್ದು, ಈಗ ಉಭಯ ಪಕ್ಷಗಳು ಪರಸ್ಪರ ಕೆಸರೆರಚಾಟ ಆರಂಭಿಸಿವೆ.
ಒಂದೆಡೆ ಪಿಡಿಪಿ ನಾವು ಸರ್ಕಾರ ರಚನೆಗೆ ಯಾವುದೇ ಹೊಸ ಷರತ್ತುಗಳನ್ನು ವಿಧಿಸಿಲ್ಲ. ಬಿಜೆಪಿಯೇ ಪ್ರಕ್ರಿಯೆಗೆ ಅಡಚಣೆಯುಂಟು ಮಾಡುತ್ತಿದೆ ಎಂದರೆ, ಇತ್ತ ಬಿಜೆಪಿ, ಪಿಡಿಪಿ ಒಂದೇ ಸಮನೆ ಹೊಸ ಷರತ್ತುಗಳನ್ನು ಹಾಕಿ ಅಡ್ಡಗಾಲು ಹಾಕುತ್ತಿದೆ ಎಂದು ಹೇಳುತ್ತಿದೆ.
ಕಾರಣ ಬಿಜೆಪಿಗೆ ಗೊತ್ತು
ಬಿಜೆಪಿ ತನ್ನ ಮನಸ್ಸಿಗೆ ಬಂದಂತೆ ಬದಲಾವಣೆಗಳನ್ನು ಮಾಡುತ್ತಿದೆ. ಕಾರಣಗಳು ಬಿಜೆಪಿಗೇ ಗೊತ್ತು ಎಂದು ಹಿರಿಯ ಪಿಡಿಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಯ ನಂತರ ಎಲ್ಲವೂ ಸರಿಯಾಯ್ತು ಎನ್ನುವಾಗ ಬಿಜೆಪಿ ತಡಮಾಡುತ್ತಿರುವುದೇಕೆ? ಎಂದೂ ಇದೇ ಅಧಿಕಾರಿ ಪ್ರಶ್ನಿಸಿದ್ದಾರೆ. ಇದೆಲ್ಲವನ್ನೂ ನೋಡಿದರೆ ಎರಡೂ ಪಕ್ಷಗಳಿಗೆ ಒಳಗೆ ರಾಜಕೀಯ ಒತ್ತಡಗಳಿರುವ ಸಾಧ್ಯತೆಗಳಿವೆ ಎನಿಸುತ್ತಿದೆ.
ರಾಷ್ಟ್ರಹಿತ ಬಲಿ ಇಲ್ಲ
ಮೆಹಬೂಬಾ ಕಠಿಣ ನಿಲುವು ತಳೆದಿದ್ದಾರೆ. ಏನೇ ಆದರೂ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಗೊಟ್ಟು ರಾಜಿಯಾಗಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ ನಾಯಕ ರಾಮ್ ಮಾಧವ್ ಹೊಸದಾಗಿ ಏನನ್ನು ಮಾಡಬೇಕಾದರೂ ಸರ್ಕಾರ ರಚನೆಯ ನಂತರವೇ ಎಂದಿದ್ದಾರೆ.
ಮೊದಲನೆಯದಾಗಿ ಯಾವುದೇ ಹೊಸ ಷರತ್ತಿಗೆ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಎರಡನೆಯದಾಗಿ ಬೇಡಿಕೆಗಳೇನಾದರೂ ಇದ್ದರೆ ಸರ್ಕಾರ ರಚನೆ ನಂತರ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.