ನವದೆಹಲಿ (ಪಿಟಿಐ): ದೇಶದ್ರೋಹ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್ಎಆರ್ ಗಿಲಾನಿ ಅವರಿಗೆ ಶನಿವಾರ ಜಾಮೀನು ಸಿಕ್ಕಿದೆ.
ಕಳೆದ ತಿಂಗಳು ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಗಿಲಾನಿ ವಿರುದ್ಧದ ದೇಶದೋಹ್ರ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೀಪಕ್ ಗರ್ಗ್ ಅವರು 50 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಶ್ಯೂರಿಟಿಯ ಮೇಲೆ ಗಿಲಾನಿಗೆ ಜಾಮೀನು ನೀಡಿದರು.
ಗಿಲಾನಿ ಅವರು ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂಬುದಕ್ಕೆ ಹಾಗೂ ಇತರರಿಗೆ ಹಾಗೆ ಸೂಚಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಅರ್ಜಿ ವಿಚಾರಣೆಯ ವೇಳೆ ಗಿಲಾನಿ ಪರ ವಕೀಲ ಸತೀಶ್ ತಮ್ತಾ ವಾದಿಸಿದರು.
ಆದರೆ, ಗಿಲಾನಿ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ಪ್ರೆಸ್ಕ್ಲಬ್ ಘಟನೆ ‘ಭಾರತದ ಆತ್ಮದ ಮೇಲಿನ ಪ್ರಹಾರ’ ಎಂದು ವಾದಿಸಿತು.
ಅಲ್ಲದೇ, ‘ಪ್ರೆಸ್ಕ್ಲಬ್ನಲ್ಲಿ ನಡೆದಿದ್ದು ಜೆಎನ್ಯು ಘಟನೆಯ ಮುಂದುವರಿದ ಭಾಗ. ಪ್ರೆಸ್ ಕ್ಲಬ್ ಅಧಿಕಾರಿಗಳ ಪ್ರಕಾರ, ‘ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗಲಾಗಿತ್ತು. ಅದರಲ್ಲಿ ಗಿಲಾನಿ ಅವರೂ ಪಾಲ್ಗೊಂಡಿದ್ದರು. ಗಿಲಾನಿ ದೇಶದ ಕಾನೂನನ್ನು ಉಲ್ಲಂಘಿಸಿದ್ದು, ಘೋರ ಅಪರಾಧ ಎಸೆಗಿದ್ದಾರೆ’ ಎಂದೂ ಪ್ರಾಸಿಕ್ಯೂಷನ್ ವಾದಿಸಿತು.
ದೇಶದ್ರೋಹ ಆರೋಪದ ಮೇಲೆ ಫೆಬ್ರುವರಿ 16ರಂದು ಬಂಧನಕ್ಕೊಳಗಾದ ಗಿಲಾನಿ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಫೆಬ್ರುವರಿ 19ರಂದು ವಜಾಗೊಳಿಸಿತ್ತು.
ರಾಷ್ಟ್ರೀಯ