ಆಗ್ರಾ: ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳು ಬೀಫ್ ತಿನ್ನುತ್ತಿದ್ದಾರೆ ಎಂಬ ವಿಡಿಯೊ ಸಾಮಾಜಿಕ ಅಂತರ್ಜಾಲದಲ್ಲಿ ವೈರಲ್ ಆದ ಕಾರಣದಿಂದ ಶನಿವಾರ ಆಗ್ರಾದಲ್ಲಿ ಉದ್ವಿಘ್ನ ವಾತಾವರಣ ಉಂತಾಗಿತ್ತು. ಆದರೆ ಈ ವಿಡಿಯೋದ ಸತ್ಯಾಸತ್ಯತೆಯನ್ನು ಯಾವುದೇ ಅಧಿಕಾರಿ ಧೃಢೀಕರಿಸಿಲ್ಲ.
ಕೇಂದ್ರ ಹಿಂದಿ ಸಂಸ್ಥೆಯ ಎದುರು ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಸ್ಟಾರ್ ಕಾಮತ್ ತ್ರಿಪಾಠಿ “ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ”.
ಮಾಧ್ಯಮಗಳ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಕೇಂದ್ರ ಹಿಂದಿ ಸಂಸ್ಥೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಗುರುವಾರ ರಾಜಸ್ಥಾನದ ಮೇವಾರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಭೀಫ್ ಬೇಯಿಸುತ್ತಿದ್ದಾರೆ ಎಂದು ಕೆಲವು ಹಿಂದುತ್ವ ಸಂಘಟನೆಗಳು ದಾಳಿ ನಡೆಸಿದ್ದವು. ನಂತರ ಅದು ಮೇಕೆ ಮಾಂಸ ಎಂದು ತಿಳಿದುಬಂದಿದೆ. ದೇಶದ ಬೇರೆ ಕಡೆಗಳಲ್ಲೂ ಹಿಂದುತ್ವ ಸಂಘಟನೆಗಳು ಬೀಫ್ ಸಲುವಾಗಿ ಹಲವಾರು ರಾದ್ಧಾಂತಗಳನ್ನು ಹುಟ್ಟಿಹಾಕಿವೆ.
ಗೋಹತ್ಯೆಯನ್ನು ವಿರೋಧಿಸುತ್ತಿದ್ದ ವಿಶ್ವ ಹಿಂದೂ ಪರಿಷತ್ತಿನ ನಾಯಕ ಅರುಣ್ ಮಹೂರ್ ಅವರ ಕೊಲೆಯ ಹಿನ್ನಲೆಯಲ್ಲಿ ಈಗಾಗಲೇ ಘರ್ಷಣೆಗಳಿಂದ ಬೆಂದಿರುವ ಆಗ್ರಾಗೆ ಬೀಫ್ ವಿಷಯ ಹೆಚ್ಚಿನ ತಲೆನೋವಾಗಿ ಪರಿಣಮಿಸಿದೆ.