ಆಗ್ರಾ: ಪತ್ನಿ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರ ಬಗ್ಗೆ ಕೋಪೋದ್ರಿಕ್ತನಾದ ಪತಿ ತನ್ನ ೬ ವರ್ಷ ವಯಸ್ಸಿನ ಮಗನನ್ನು ಚಾಕುವಿನಿಂದ ಇರಿದು ಕೊಂಡು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೇಜ್ಸಿಂಗಾಪುರ ಹಳ್ಳಿಯ ಬಹ್ ಪ್ರದೇಶದಲ್ಲಿ ನಡೆದಿದೆ.
ಗೌರಿಶಂಕರ್ ಮಗನನ್ನು ಕೊಂದು, ಆತ್ಮಹತ್ಯೆಗೆ ಶರಣಾದ ದುರ್ದೈವಿ. ‘ನನ್ನ ಸೊಸೆ ಪಿಂಕಿ ಪತಿ ಇಲ್ಲದ ವೇಳೆ ಉದಯ್ವೀರ್ ಎಂಬುವರನ್ನು ಭೇಟಿಯಾಗುತ್ತಿದ್ದಳು. ಈ ಕುರಿತು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ, ಇದು ಮುಂದುವರೆದಿತ್ತು’ ಎಂದು ಗೌರಿಶಂಕರ್ ತಂದೆ ಆಶಾರಾಂ ತಿಳಿಸಿದ್ದಾರೆ.
ಕಳೆದ ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದ ಗೌರಿಶಂಕರ್, ಪತ್ನಿ ಪಿಂಕಿ ಇಲ್ಲದಿರುವುದನ್ನು ಗಮನಿಸಿದ್ದಾನೆ. ಫೋನ್ ಮಾಡಿ ವಿಚಾರಿಸಿದಾಗ ಆಕೆ ತನ್ನ ತಾಯಿ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾಳೆ. ಮರು ದಿನ ಬೆಳಗ್ಗೆ ಗೌರಿಶಂಕರ್ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗ ಹಿಮಾಂಶು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ ಈ ಕೃತ್ಯ ಎಸಗಿದ್ದು, ಇದೀಗ ಪ್ರಕರಣ ದಾಖಲಿಸಿಕೊಂಡು ಪತ್ನಿ ಹಾಗೂ ಆಕೆಯ ಪ್ರಿಯಕರನ ಪತ್ತೆಗೆ ಶೋಧಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.