ನವದೆಹಲಿ: ಸಾಲದ (ಬ್ಯಾಡ್ಲೋನ್) ಹೊರೆಯನ್ನು ವಸೂಲು ಮಾಡಲು ಸಾಧ್ಯವಾಗದಿರುವುದರಿಂದ, ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿರುವುದರಿಂದ ಹಾಗೂ ಖಾಸಗಿ ಬ್ಯಾಂಕ್ಗಳ ಪೈಪೋಟಿಯಿಂದಾಗಿ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ 27ರಷ್ಟಿರುವ ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಂಖ್ಯೆ 6ಕ್ಕೆ ಇಳಿಯುವ ಸಾಧ್ಯತೆ ಇದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಳೆದ ವಾರ ನಡೆದ ಬ್ಯಾಂಕರುಗಳ ಸಮಾವೇಶದಲ್ಲಿ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳು ಬೇಕಾಗುವುದಕ್ಕಿಂತ ಗುಣಮಟ್ಟದ ಬ್ಯಾಂಕುಗಳ ಅವಶ್ಯಕತೆಯಿದೆ ಎಂದು ಹೇಳಿದ್ದರು.
ಸರ್ಕಾರಿ ವಲಯದ ಬ್ಯಾಂಕ್ಗಳ ಪೈಕಿ ಹಲವು ಬ್ಯಾಂಕ್ಗಳು ಭಾರೀ ಪ್ರಮಾಣದಲ್ಲಿ ಬ್ಯಾಡ್ಲೋನ್ ಸಮಸ್ಯೆಯಿಂದ ಬಳಲುತ್ತಿವೆ. ಜೊತೆಗೆ ಈ ಹಿಂದೆ ಆರ್ಬಿಐ ಗವರ್ನರ್ ರಘುರಾಂ ರಾಜನ್ ಅವರು, ವಿದೇಶಗಳಲ್ಲಿ ಇರುವಂತೆ ಭಾರತದಲ್ಲಿಯೂ ಸಣ್ಣಪುಟ್ಟ ಬ್ಯಾಂಕ್ಗಳನ್ನು ವಿಲೀನ ಮಾಡುವ ದೊಡ್ಡ ಬ್ಯಾಂಕ್ಗಳನ್ನು ಸೃಷ್ಟಿಸಬೇಕು. ಅವು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವಂತಿರಬೇಕು ಎಂದು ಸಲಹೆ ನೀಡಿದ್ದರು. ಈ ಎಲ್ಲಾ ಸಲಹೆ ಸೂಚನೆಗಳ ಬೆನ್ನಲ್ಲೇ, ಇದೀಗ ಕೇಂದ್ರ ಸರ್ಕಾರ ಸರ್ಕಾರಿ ಬ್ಯಾಂಕ್ಗಳ ವಿಲೀನಕ್ಕೆ ಗಂಭೀರ ಚಿಂತನೆ ನಡೆಸಿದೆ.
ಯಾವ ಬ್ಯಾಂಕ್ಗಳ ಜೊತೆ ಯಾವುದನ್ನು ವಿಲೀನ ಮಾಡಬಹುದು? ವಿಲೀನ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದರ ಕುರಿತು ವರದಿ ನೀಡಲು ಶೀಘ್ರವೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎನ್ನಲಾಗಿದೆ. ಅಲ್ಲದೆ ಇಡೀ ವಿಲೀನ ಪ್ರಕ್ರಿಯೆ 2016ರ ಏ.1ರ ವೇಳೆಗೆ ಸ್ಥಾಪನೆಯಾಗಲಿರುವ ಬ್ಯಾಂಕ್ಸ್ ಬೋರ್ಡ್ ಬ್ಯೂರೋ (ಬಿಬಿಬಿ)ದ ಮೇಲ್ವಿಚಾರಣೆಯಲ್ಲೇ ನಡೆಯಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್ ನಲ್ಲಿ ತನ್ನ ಷೇರನ್ನು ಶೇಕಡಾ 50 ಕ್ಕಿಂತಲೂ ಕಡಿಮೆ ಮಾಡಲು ಯೋಚಿಸುತ್ತಿದ್ದು, ಅದು ಇತರ ಕೆಲವು ಸಾರ್ವಜನಿಕ ಉದ್ಯಮ ಬ್ಯಾಂಕುಗಳಿಗೂ ವಿಸ್ತರಣೆಯಾಗುತ್ತದೆ.
ಸರ್ಕಾರಿ ಬ್ಯಾಂಕ್ಗಳಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ವಿಲೀನವಾದರೆ, ನೌಕರರ ಸಂಖ್ಯೆ ಕಡಿತ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಬ್ಯಾಂಕ್ಗಳ ವಿಲೀನದಲ್ಲಿ ತಾನು ನೇರವಾಗಿ ಭಾಗಿಯಾಗುವುದಿಲ್ಲ ಎಂದು ಸರ್ಕಾರ ಹೇಳಿಕೊಂಡು ಬಂದಿದೆಯಾದರೂ, ಒಂದು ವೇಳೆ ಯಾವುದಾದರೂ ಬ್ಯಾಂಕ್, ವಿಲೀನಕ್ಕೆ ಒಪ್ಪದೇ ಹೋದಲ್ಲಿ ಅಂಥ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಲಿದೆ ಎನ್ನಲಾಗಿದೆ. ಸರ್ಕಾರ ಈ ನಿರ್ಧಾರ ತೆಗೆದುಕೊಂಡರೆ ರಾಜಕೀಯ ಪಕ್ಷಗಳಿಂದ ಮತ್ತು ಸಮಾಜದ ಒಂದು ವರ್ಗದವರಿಂದ ವಿರೋಧ ಕೇಳಿಬಂದೀತು.