ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾಸಭೆ ಚುನಾವಣೆಯ ದಿನಾಂಕವನ್ನು ಶುಕ್ರವಾರ ಪ್ರಕಟಿಸಿದ್ದು, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಜೀಮ್ ಜೈದಿ ಅವರು ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈದಿ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.
ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾಸಭೆಗೆ ಮೇ 16ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 19ರಂದು ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದರು.
ಇದೇ ಮೊದಲ ಬಾರಿ ನೋಟಾಗೆ ಪ್ರತ್ಯೇಕ ಚಿಹ್ನೆ ನೀಡಲಾಗಿದ್ದು, ಎಲ್ಲ 5 ರಾಜ್ಯಗಳಲ್ಲೂ ಮತಕೇಂದ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದಾಗಿ ಜೈದಿ ತಿಳಿಸಿದರು.
ಅಸ್ಸಾಂನಲ್ಲಿ ಎರಡು ಹಂತದ ಚುನಾವಣೆ
ಅಸ್ಸಾಂ ವಿಧಾಸಭೆಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 4ರಂದು ಮೊದಲ ಹಂತದಲ್ಲಿ 65 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನೂ ಏಪ್ರಿಲ್ 11ರಂದು ಎರಡನೇ ಹಂತದಲ್ಲಿ 61 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ 6 ಹಂತದ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಒಟ್ಟು 6 ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 4 ಮತ್ತು 11ರಂದು ಮೊದಲನೇ ಹಂತ, ಏಪ್ರಿಲ್ 17ರಂದು 2ನೇ ಹಂತ, ಏಪ್ರಿಲ್ 21ರಂದು 3ನೇ ಹಂತ, ಏಪ್ರಿಲ್ 25ರಂದು ನಾಲ್ಕನೆ ಹಂತ, ಏಪ್ರಿಲ್ 30ರಂದು 5ನೇ ಹಂತ ಹಾಗೂ ಮೇ 5ರಂದು 6ನೇ ಹಂತದ ಚುನಾವಣೆ ನಡೆಯಲಿದೆ.