ನವದೆಹಲಿ: ಮಾರ್ಚ್ 19 ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯ ಬೇಕಾಗಿದ್ದ ಇಂಡೋ-ಪಾಕ್ ಪಂದ್ಯಕ್ಕೆ ಭದ್ರತಾ ವಿಚಾರವಾಗಿ ಹಿಮಾಚಲ ಪ್ರದೇಶ ಸರ್ಕಾರ ಖ್ಯಾತೆ ತೆಗೆದ ಹಿನ್ನಲೆಯಲ್ಲಿ ಈ ಪಂದ್ಯ ಕೋಲ್ಕತಾದ ಈಡನ್ ಗಾರ್ಡ್ನ್ಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಅನುರಾಗ್ ಠಾಕೂರ್, ಕ್ರೀಡೆಯಲ್ಲಿ ರಾಜಕೀಯ ಸುಳಿದಾಡಿರುವುದೆ ಇದಕ್ಕೆ ಕಾರಣ. ಕೊನೆಯ ಘಳಿಗೆಯಲ್ಲಿ ಭದ್ರತಾ ವಿಚಾರವಾಗಿ ಹಿಮಾಚಲ ಪ್ರದೇಶ ಸರ್ಕಾರ ಪಂದ್ಯಕ್ಕೆ ಅಡ್ಡಿಯಾಗಿರುವುದು ಸರಿಯಲ್ಲ. ಧರ್ಮಶಾಲೆಯಲ್ಲಿ ಇಂಡೋ-ಪಾಕ್ ಮ್ಯಾಚ್ ನಡೆಯದಿದ್ದರೆ ಮುಂದಿನ ಹತ್ತು ವರ್ಷ ಐಸಿಸಿ ಈ ಕ್ರೀಡಾಂಗಣವನ್ನು ಬ್ಯಾನ್ ಮಾಡಬೇಕೆಂದು ಸೂಚಿಸಿರುವುದಾಗಿ ಗುರುವಾರ ತಿಳಿಸಿದರು.
ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರ ಆಡಳಿತದಲ್ಲಿರುವುದರಿಂದ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಠಾಕೂರ್ ಆರೋಪಿಸಿದರು.
ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಹ ತಂಡಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಮನವಿ ಸಲ್ಲಿಸಿರುವುದರಿಂದ ಪಂದ್ಯವನ್ನು ಕೋಲ್ಕತಾದ ಈಡನ್ಗಾರ್ಡನ್ಗೆ ವರ್ಗಾಯಿಸಲು ಐಸಿಸಿ ಚಿಂತಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಧರ್ಮಶಾಲಾದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಗೃಹ ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದಿದ್ದರು.