ನವದೆಹಲಿ (ಪಿಟಿಐ): ಜನವರಿಯಲ್ಲಿ ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದವರು ಪಾಕ್ ಮೂಲದ ಉಗ್ರರು. ಈ ಕೃತ್ಯದಲ್ಲಿ ಪಾಕ್ ಸರ್ಕಾರದ ಬೆಂಬಲ ಇರುವ ‘ಹೊರಗಿನ ವ್ಯಕ್ತಿಗಳ’ ಕೈವಾಡವೂ ಇದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತನಿಖೆ ಪೂರ್ಣಗೊಂಡ ನಂತರ ಈ ಕುರಿತು ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ. ಆದರೆ, ಖಂಡಿತವಾಗಿಯೂ ಈ ದಾಳಿಯಲ್ಲಿ, ಪಾಕ್ ಮೂಲದ ‘ನಾನ್ ಸ್ಟೇಟ್ ಆ್ಯಕ್ಟರ್ಸ್’ಗಳ ಕೈವಾಡ ಇದ್ದೇ ಇದೆ ಎಂದು ಅವರು ಹೇಳಿದರು.
ಸರ್ಕಾರದ ಸಂಪೂರ್ಣ ಬೆಂಬಲ ಇಲ್ಲದೆ ಯಾವುದೇ ರೀತಿಯಲ್ಲಿ ‘ಹೊರಗಿನ ವ್ಯಕ್ತಿಗಳು’ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪಠಾಣ್ಕೋಟ್ ದಾಳಿ ಕೂಡ ಈ ರೀತಿ ನಡೆದಿದೆ ಎಂದು ಪರಿಕ್ಕರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಪಠಾಣ್ಕೋಟ್ ಮೇಲಿನ ದಾಳಿಯು ಕೇವಲ ಒಂದು ಭಯೋತ್ಪಾದನೆ ದಾಳಿಯೇ ಅಥವಾ ಪಾಕ್ ಸೇನೆಯ ಬೆಂಬಲದೊಂದಿಗೆ ನಡೆದ ಸಶಸ್ತ್ರ ಕಾರ್ಯಾಚರಣೆಯೇ ಎಂದು ಶಿವಸೇನಾ ಸದಸ್ಯ ಸಂಜಯ್ ರಾವತ್ ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸಿದರು.