ಶಿಮ್ಲಾ: ಧರ್ಮಶಾಲಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸುವಂತೆ ಬಿಜೆಪಿಯ ಹಿರಿಯ ಮುಖಂಡ ಶಾಂತಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಮಾರ್ಚ್ 19 ರಂದು ಧರ್ಮಶಾಲಾದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಕಾನೂನು ಮತ್ತು ಸುವ್ಯವಸ್ಥತೆ ಹದಗೆಡುವ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸುವಂತೆ ಶಾಂತಕುಮಾರ್ ಮನವಿ ಮಾಡಿದ್ದಾರೆ.
ಪಠಾಣ್ಕೋಟ್ ವಾಯುನೆಲೆ ಪಾಕಿಸ್ತಾನ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ರಾಜ್ಯದ ಇಬ್ಬರು ಯೋಧರು ಮೃತಪಟ್ಟಿದ್ದರು. ಅಲ್ಲದೇ ಇಬ್ಬರೂ ಯೋಧರ ಸ್ಮಾರಕಗಳು ಕ್ರೀಡಾಂಗಣದಿಂದ ಕೆಲವೇ ದೂರದಲ್ಲಿದೆ ಎಂದು ಹಿಮಾಚಲಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಶಾಂತಕುಮಾರ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ-ಪಾಕ್ ಪಂದ್ಯವನ್ನು ರದ್ದು ಮಾಡುವ ಮೂಲಕ ರಾಜ್ಯದ ಯೋಧರಿಗೆ ಗೌರವ ಸಲ್ಲಿಸಬೇಕು. ಅಂತೆ ಪಠಾಣ್ಕೋಟ್ ಮತ್ತು ಗುರುದಾಸ್ಪುರ್ ದಾಳಿ ಹಿನ್ನೆಲೆ ಪಾಕಿಸ್ತಾನ ಜೊತೆಗಿನ ಶಾಂತಿ ಮಾತುಕತೆ ಮುಂದೂಡಿದಂತೆ ಕ್ರಿಕೆಟ್ ಪಂದ್ಯವನ್ನು ಯಾಕೆ ರದ್ದು ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.