ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಕೀಲ ವಿಕ್ರಂ ಚೌಹಾಣ್ ನನ್ನು ಬಂಧಿಸಲಾಗಿದೆ.
ಜೆಎನ್ ಯು ಪ್ರಾಧ್ಯಾಪಕರು, ಪತ್ರಕರ್ತರು ಹಾಗೂ ದೇಶವಿರೋಧಿ ಘೋಷಣೆ ಕೂಗಿದ್ದರೆನ್ನಲಾದ ವಿದ್ಯಾರ್ಥಿಗಳನ್ನು ಕಳೆದ ವಾರ ವಕೀಲ ವಿಕ್ರಂ ಚೌಹಾಣ್ ಪಾಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಥಳಿಸಿದ್ದರು. ಈ ಸಂಬಂಧ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ ವಿಕ್ರಂ ಚೌಹಾಣ್ ನನ್ನು ಬಂಧಿಸಲಾಗಿದೆ.
ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಪತ್ರಕರ್ತರನ್ನು ಥಳಿಸುತ್ತಿದ್ದ ವಕೀಲರ ಗುಂಪಿನಲ್ಲಿ ವಿಕ್ರಂ ಚೌಹಾಣ್ ಇರುವುದು ವಿಡಿಯೋ ಮೂಲಕ ಸ್ಪಷ್ಟವಾಗಿತ್ತು. ಅಲ್ಲದೇ ದೇಶವಿರೋಧಿ ಘೋಷಣೆ ಕೂಗುವವರನ್ನು ಥಳಿಸುತ್ತೇನೆ ಎಂದು ವಿಕ್ರಂ ಚೌಹಾಣ್ ಹೇಳಿಕೆ ನೀಡಿದ್ದರು.
ಹಲ್ಲೆ ಪ್ರಕರಣದ ಸಂಬಂಧ ಸಮನ್ಸ್ ಜಾರಿ ಮಾಡಿದ 6 ದಿನಗಳ ನಂತರ ವಿಕ್ರಂ ಚೌಹಾಣ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು.