ತಿರುವನಂತಪುರ (ಪಿಟಿಐ): ಬಹುಕೋಟಿ ಸೋಲಾರ್ ಹಗರಣದಲ್ಲಿ ಆಪಾದನೆ ಎದುರಿಸುತ್ತಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ತಮ್ಮ ವಿರುದ್ಧದ ಆರೋಪ ಸಾಬೀತು ಪಡಿಸುವಂತೆ ವಿರೋಧ ಪಕ್ಷಗಳಿಗೆ ಬುಧವಾರ ಸವಾಲು ಹಾಕಿದ್ದಾರೆ.
ಅಲ್ಲದೇ, ಆರೋಪದಲ್ಲಿ ‘ಒಂದಂಶ ಸತ್ಯ ಸಾಬೀತಾದರೂ’ ಸಾರ್ವಜನಿಕ ಜೀವನ ತೊರೆಯುವೆ’ ಎಂದಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಬುಧವಾರ ಇಲ್ಲಿ ಮಾತನಾಡಿದರು.
‘ಸತ್ಯ ಹೊರ ಬರಲಿದ್ದು, ನಿಜಕ್ಕೂ ಏನು ನಡೆದಿತ್ತು ಎಂಬುದು ರಾಜ್ಯದ ಜನತೆಗೆ ತಿಳಿಯಲಿದೆ. ಆರೋಪಗಳಲ್ಲಿ ಎಳ್ಳಷ್ಟು ಸತ್ಯ ಸಾಬೀತಾದರೂ ಸಾರ್ವಜನಿಕ ಜೀವನವನ್ನು ತೊರೆಯುವೆ’ ಎಂದು ಸವಾಲು ಹಾಕಿದರು.
ಹಗರಣವನ್ನು ಪ್ರಸ್ತಾಪಿಸಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಿಪಿಎಂ ನೇತೃತ್ವದ ಎಲ್ಡಿಎಫ್ ನಡೆಯು ‘ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಚಾಂಡಿ ಅವರು ಜರೆದರು.
‘ಯುಡಿಎಫ್ನ ಐದು ವರ್ಷಗಳ ಜನಪ್ರಿಯ ಆಡಳಿತದಿಂದ ವಿರೋಧ ಪಕ್ಷವು ಹತಾಶೆಗೊಂಡಿದೆ. ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ’ ಎಂದರು.