ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಕಲೆಯನ್ನು ಕಲಿಯಬೇಕಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ಘಟಕ-ಆರ್ಆ್ಯಂಡ್ ಎಡಬ್ಲ್ಯೂ) ಮಾಜಿ ಮುಖ್ಯಸ್ಥ ಅಮರ್ಜಿತ್ ಸಿಂಗ್ ದುಲಾತ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಮಾಧ್ಯಮವೊಂದರಲ್ಲಿ ಮಾತಾಡಿದ ದುಲಾತ್, ಜವಾಹರ್ಲಾಲ್ ನೆಹರೂ ನಂತರ ಅಟಲ್ ಬಿಹಾರಿ ವಾಜಪೇಯಿ ಮಾತ್ರವೇ ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಕಾಶ್ಮೀರ್- ದ ವಾಜಪೇಯಿ ಇಯರ್ಸ್ ಎಂಬ ಪುಸ್ತಕದ ಲೇಖಕರಾದ ದುಲಾತ್, ಪುಸ್ತಕದ ಬಗ್ಗೆ ಮಾತಾಡುತ್ತಾ ವಾಜಪೇಯಿ ಒಬ್ಬ ನಾಯಕ ಮತ್ತು ರಾಜಕಾರಣಿಯಾಗಿದ್ದರು. ಮೋದಿಯವರು ವಾಜಪೇಯಿ ಅವರಿಂದ ಕಲಿಯಬೇಕಾದುದು ಸಾಕಷ್ಟಿದೆ. ಭಾರತ ಕಂಡ ಅತೀ ಉತ್ತಮ ರಾಜಕಾರಣಿ ವಾಜಪೇಯಿ. ಅವರಿಂದ ಮೋದಿ ರಾಜಕೀಯವನ್ನು ಕಲಿಯಲಿ ಎಂಬುದು ನನ್ನ ವಿನಂತಿ ಎಂದಿದ್ದಾರೆ.
1965ರಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ದುಲಾತ್, ಮನಮೋಹನ್ ಸಿಂಗ್ ಮೋದಿಗಿಂತ ಉತ್ತಮ ಪ್ರಧಾನಿಯಾಗಿದ್ದರು. ಯಾಕೆಂದರೆ ಸಿಂಗ್ ಅವರು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಶ್ರಮ ವಹಿಸಿದ್ದರು ಎಂದು ಹೇಳಿದ್ದಾರೆ.