ನವದೆಹಲಿ: ಕೇಂದ್ರ ಸರಕಾರ ನನ್ನ ಕುಟುಂಬದ ಸದಸ್ಯರಿಗೆ ಕಿರುಕುಳ ಕೊಡುತ್ತಿದೆ. ಒಂದು ವೇಳೆ, ನನ್ನ ಪುತ್ರ ಕಾರ್ತಿಕ್ ಗೆಳೆಯರಿಗೆ ತೊಂದರೆ ಕೊಡುವ ಬದಲು ನೇರವಾಗಿ ನನ್ನ ಗುರಿಯಾಗಿಸಿ ಎಂದು ಮಾಜಿ ವಿತ್ತಖಾತೆ ಸಚಿವ ಪಿ,ಚಿದಂಬರಂ ಗುಡುಗಿದ್ದಾರೆ.
ಒಂದು ವೇಳೆ, ಕೇಂದ್ರ ಸರಕಾರಕ್ಕೆ ನನ್ನ ಗುರಿಯಾಗಿಸಬೇಕಾದಲ್ಲಿ ನೇರವಾಗಿ ಗುರಿಯಾಗಿಸಿ. ಅದನ್ನು ಬಿಟ್ಟು ರಾಜಕೀಯಕ್ಕೆ ಸಂಬಂಧವಿರದ ನನ್ನ ಪುತ್ರ ಕಾರ್ತಿಕ್ನ ಉದ್ಯಮಿ ಗೆಳೆಯರಿಗೆ ಕಿರುಕುಳ ಕೊಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚಿದಂಬರಂ ಪುತ್ರ ಕಾರ್ತಿಕ್ ಗೆಳೆಯರ ನಿವಾಸಗಳ ಮೇಲೆ ರೈಡ್ ಮಾಡಿದ ನಂತರ ಚಿದಂಬರಂ ಹೇಳಿಕೆ ಹೊರಬಿದ್ದಿದೆ.
ಕೇಂದ್ರ ಸರಕಾರದ ಸೇಡಿನ ರಾಜಕೀಯಕ್ಕೆ ನಮ್ಮ ಕುಟುಂಬ ಮತ್ತು ನಾನು ಎದುರಿಸಲು ಸಿದ್ದವಾಗಿದ್ದೇವೆ ಎಂದು ಗುಡುಗಿದ್ದಾರೆ.
ನಾನಾಗಲಿ ಅಥವಾ ನಮ್ಮ ಕುಟುಂಬದ ಸದಸ್ಯರಾಗಲಿ ಯಾವುದೇ ಕಂಪೆನಿಗಳಲ್ಲಿ ಶೇರುಗಳಾಗಲಿ ಅಥವಾ ಹೂಡಿಕೆಗಳಾಗಲಿ ಮಾಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರೂ ಕೇಂದ್ರ ಸರಕಾರ ನಮ್ಮ ವಿರುದ್ಧ ಮಲತಾಯಿ ಧೋರಣೆ ತಾಳಿದೆ ಎಂದು ಮಾಜಿ ಸಚಿವ ಚಿದಂಬರಂ ಕಿಡಿಕಾರಿದ್ದಾರೆ.