ಚೆನ್ನೈ: ನಮ್ಮ ಜೀವನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮದುವೆ ಮೊದಲ ಆಯ್ಕೆಯಾಗಿರುವುದಿಲ್ಲ. ಆದರೆ ಕುಂಭದ್ರೋಣ ಮಳೆಯಿಂದಾಗಿ ಜಲ ಪ್ರಳಯ ಉಂಟಾಗಿರುವ ತಮಿಳುನಾಡಿನಲ್ಲಿ ಮಳೆಯನ್ನೂ ಲೆಕ್ಕಿಸದೇ ಬುಧವಾರ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ಇಂದು ಮದುವೆಗೆ ಶುಭ ದಿನ. ಹೀಗಾಗಿ ನಿಗದಿಯಂತೆ ನಮ್ಮ ಹಾಲ್ನಲ್ಲಿ ಮದುವೆ ಸಮಾರಂಭ ನಡೆಯಿತು’ ಎಂದು ಎವಿಎಂ ರಾಜೇಶ್ವರಿ ಕಲ್ಯಾಣ ಮಂಟಪದ ವ್ಯವಸ್ಥಾಪಕ ಕೆ.ಎಂ. ಕಣ್ಣನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಯಾವುದೇ ವಿಘ್ನವಿಲ್ಲದೆ ಮದುವೆಗಳು ನಡೆಯುತ್ತಿವೆ ಮತ್ತು ಮಳೆಯಿಂದಾಗಿ ಮದುವೆ ಮುಂದೂಡಿದ ಸುದ್ದಿ ನಾನು ಇದುವರೆಗೂ ಕೇಳಿಲ್ಲ’ ಎಂದು ಅವರು ಹೇಳಿದ್ದಾರೆ.
ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಕಳೆದ 1 ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿದ್ದ ಚೆನ್ನೈನಲ್ಲಿ ಮತ್ತೆ ಮಳೆಯಾಗುತ್ತಿದ್ದು, ನಗರವೆಲ್ಲಾ ಸಂಪೂರ್ಣ ಜಲಮಯವಾಗಿದೆ.