ತಿರುವನಂತಪುರ: ರಾಜಸ್ಥಾನದ ಅರಮನೆಯ ಮಾದರಿಯಲ್ಲಿ ನಿರ್ಮಿಸಲಾದ 3,55,000 ಚದರ ಅಡಿಯ ಪಂಡಾಲ್, ಬರೋಬ್ಬರಿ 30 ಸಾವಿರ ಅತಿಥಿಗಳು, 250 ಪೊಲೀಸರು ಹಾಗೂ 350 ಖಾಸಗಿ ಪೊಲೀಸರಿಂದ ಭದ್ರತೆ,
ಹೌದು. ಶುಕ್ರವಾರ ದೇವರ ನಾಡಲ್ಲಿ ದೇವಲೋಕವೇ ಧರೆಗಿಳಿದು ಬಂದಿತ್ತು. ಎನ್ನಾರೈ ಉದ್ಯಮಿ ರವಿ ಪಿಳ್ಳೈ ಅವರು ಬರೋಬ್ಬರಿ ರು.55 ಕೋಟಿ ವೆಚ್ಚ ಮಾಡಿ, ತಮ್ಮ ಪುತ್ರಿಯ ಅದ್ಧೂರಿ ಮದುವೆಯನ್ನು ನೆರವೇರಿಸಿದರು. ಕೇರಳದ ಕೊಲ್ಲಂನಲ್ಲಿರುವ ಆಶ್ರಮಮ್ ಮೈದಾನದಲ್ಲಿ ನಡೆದ ಡಾ. ಆರತಿ ಪಿಳ್ಳೈ ಹಾಗೂ ಡಾ. ಆದಿತ್ಯ ವಿಷ್ಣು ಅವರ ವಿವಾಹವು ಹೊಸ ದಾಖಲೆಯನ್ನೇ ಬರೆಯಿತು.
ಬ್ಲಾಕ್ಬಸ್ಟರ್ `ಬಾಹುಬಲಿ’ ಸಿನಿಮಾದ ಪ್ರೊಡಕ್ಷನ್ ಡಿಸೈನರ್ ಈ ವಿವಾಹದ ಆಯೋಜನೆಯ ಹೊಣೆ ಹೊತ್ತಿದ್ದರು. ಖ್ಯಾತ ಕಲಾ ನಿರ್ದೇಶಕ ಸಬು ಸಿರೀಲ್ 75 ದಿನಗಳಲ್ಲಿ ರಾಜಸ್ಥಾನದ ಅರಮನೆಯ ಮಾದರಿಯ ಪಂಡಾಲ್ ನಿರ್ಮಿಸಿದ್ದರು.
ಈ ಸೆಟ್ಗೇ ರು.20 ಕೋಟಿ ವೆಚ್ಚವಾಯಿತು. ಜಪಾನ್ ಗ್ಯಾಸ್ ಕಾರ್ಪೋರೇಷನ್ ಸಿಇಒ, ಬಹರೈನ್, ಸೌದಿ ಅರೇಬಿಯಾ, ಕತಾರ್, ಕುವೈಟ್ ಮತ್ತು ಯುಎಇಯ ರಾಜಮನೆತನದ ಮಂದಿ, ಕೇರಳ ಸಿಎಂ ಉಮ್ಮನ್ ಚಾಂಡಿ, ಸಿನಿಮಾ ತಾರೆಯರಾದ ಮೋಹನ್ಲಾಲ್, ಮಮ್ಮುಟ್ಟಿ ಸೇರಿದಂತೆ ಖ್ಯಾತನಾಮರು ಈ ವಿವಾಹಕ್ಕೆ ಸಾಕ್ಷಿಯಾದರು.
ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಬಹರೈನ್ ರಾಜಮನೆತನದ ಸದಸ್ಯರಿಗೆಂದು ಖಾಸಗಿ ವಿಮಾನಗಳ ಸೇವೆಯನ್ನೂ ಒದಗಿಸಲಾಗಿತ್ತು. ಒಟ್ಟಿನಲ್ಲಿ ಎಲ್ಲರೂ ಮೂಕವಿಸ್ಮಿತರಾಗುವಂತೆ ರವಿಪಿಳ್ಳೈ ಅವರು ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದರು.