ನವದೆಹಲಿ: ದೇಶದಾದ್ಯಂತ ಭಾರೀ ಕುತೂಹಲ ಕೆರಳಿರಿಸುವ ಪ್ರಕರಣ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಶೀನಾ ಖಾತೆಯಲ್ಲಿದ್ದ ಹಣವೇ ಆಕೆಯ ಕೊಲೆಗೆ ಕಾರಣವಾಯಿತೇ ಎಂಬ ಹಲವು ಪ್ರಶ್ನೆಗಳು ಇದೀಗ ಮೂಡತೊಡಗಿದೆ.
ಪ್ರಕರಣ ಸಂಬಂಧ ಮಾಸ್ಟರ್ ಮೈಂಡ್ ಎಂದೇ ಕರೆಯಲಾಗುತ್ತಿರುವ ಮಾಧ್ಯಮ ಉದ್ಯಮಿ ಪೀಟರ್ ಮುಖರ್ಜಿಯವರನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಸಿಬಿಐ ಅಧಿಕಾರಿಗಳು ಇಂದು 6 ಗಂಟೆಗಳ ಕಾಲ ಸುಧೀರ್ಘವಾಗಿ ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ಶೀನಾ ಖಾತೆಯಲ್ಲಿರುವ ಹಣವು ಪೀಟರ್ ಮುಖರ್ಜಿಯವರ ಮಾಧ್ಯಮ ಸಂಸ್ಥೆಗೇನಾದರೂ ಹೋಗಿದೆಯೇ ಎಂಬುದರ ಬಗ್ಗೆ ವಿವಿಧ ಅವಧಿಗಳಲ್ಲಿ ವಿಚಾರಣೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಶೀನಾ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಕೇವಲ ಕೆಲವು ಸಾಕ್ಷಿಯಿಂದಷ್ಟೇ ಇವರೇ ಅರೋಪಿಗಳೆಂದು ಬೆರಳು ತೋರಿಸುವುದು ಕಷ್ಟಸಾಧ್ಯ. ಶೀನಾ ಹತ್ಯೆಗೆ ಸಂಬಧಿಸಿದಂತೆ ಅಧಿಕಾರಿಗಳು ಸಾಕಷ್ಟು ರೀತಿಯಲ್ಲಿ ತನಿಖೆ ನಡೆಸುತ್ತಿದೆ ಎಂದು ಸಿಬಿಐನ ಉನ್ನತ ಮೂಲಗಳು ಮಾಹಿತಿ ನೀಡಿದೆ.
ಏಪ್ರಿಲ್, 2012ರಲ್ಲಿ ಕಣ್ಮರೆಯಾಗಿದ್ದ ಶೀನಾ ಬೋರಾಳ ದೇಹ ಮುಂಬೈನ ರಾಯ್ ಗಢ ಅರಣ್ಯದಲ್ಲಿ ಪತ್ತೆಯಾಗಿತ್ತು. ಶೀನಾ ಹತ್ಯೆಗೆ ತಾಯಿ-ಮಗಳ ಮಧ್ಯೆ ಇರುವ ಹಣಕಾಸಿನ ಭಿನ್ನಾಭಿಪ್ರಾಯದಿಂದ ಇಂದ್ರಾಣಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಶೀನಾ ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.