ಕಾನ್ಪುರ್: ಅತ್ಯಾಚಾರದ ಘಟನೆಯನ್ನು ಸಾರ್ವಜನಿಕ ಸಭೆಯಲ್ಲಿ ಬಹಿರಂಗಗೊಳಿಸಿ ಪ್ರಚಾರ ಪಡೆಯಲು ಬಯಸುತ್ತೀಯಾ ಎಂದು ಉತ್ತರಪ್ರದೇಶ ನಗರಾಭಿವೃದ್ಧಿ ಖಾತೆ ಸಚಿವ ಆಜಂ ಖಾನ್ ಯುವತಿಯನ್ನು ಪ್ರಶ್ನಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ಪರ ವಕೀಲ, ಸಚಿವರ ನೆರವು ಬಯಸಿ ಬಂದಾಗ ಗಂಗಾ ಕಿ ಪುಕಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಆಜಂ, ಕೇವಲ ಪ್ರಚಾರ ಮತ್ತು ಕೀರ್ತಿಗಾಗಿ ರೇಪ್ ವಿಷಯವನ್ನು ಸಾರ್ವಜನಿಕಗೊಳಿಸಬೇಡ ಇಲ್ಲವಾದಲ್ಲಿ ಜನತೆಯ ಮುಂದೆ ನೀನು ಗೌರವಯುತವಾಗಿ ಬಾಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.
ಸಚಿವ ಆಜಂ ಹೇಳಿಕೆಯ ಬಗ್ಗೆ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದಾಗ, ಸಚಿವ ಆಜಂ ನಾನು ಆಕೆಯ ಮನವಿಯನ್ನು ಸ್ವೀಕರಿಸುತ್ತೇನೆ. ಆಕೆ ಇದೀಗ ಪ್ರಚಾರ ಪಡೆದಿರಬಹುದು ಎಂದು ನಾನು ಭಾವಿಸುತ್ತೇನೆ. ಇದೇ ರೀತಿ ಹೇಳುತ್ತಾ ಹೋದಲ್ಲಿ ಆಕೆ ಜಗತ್ತನ್ನು ಹೇಗೆ ಎದುರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಚಿವ ಆಜಂ ಖಾನ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅತ್ಯಾಚಾರಕ್ಕೊಳಗಾದ ಯುವತಿ, ಅತ್ಯಾಚಾರವೆಸಗಿದ ಆರೋಪಿಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಚಿವರನ್ನು ಭೇಟಿ ಮಾಡಿ ನ್ಯಾಯಪಡೆಯುವ ಉದ್ದೇಶವಾಗಿತ್ತು. ಆದರೆ, ಅವರ ಅಸಭ್ಯ ವರ್ತನೆ ಹೇಸಿಗೆ ತಂದಿದೆ ಎಂದು ಕಿಡಿಕಾರಿದ್ದಾಳೆ.