ಮಿಡ್ನಾಪುರ್: ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲ ಅನ್ಯ ರಾಷ್ಟ್ರಗಳು ಮೋದಿ ಸರ್ಕಾರದ ವರ್ಚಸ್ಸನ್ನು ಕೆಡಿಸಲು ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿ ಹಿರಿಯ ನಾಯಕ ವಿಜಯ್ ವರ್ಗಿಯಾ ಕಿಡಿಕಾರಿದ್ದಾರೆ.
ಮಿಡ್ನಾಪುರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಬಿಜೆಪಿ ವಿರುದ್ಧ ಅಪ್ರಪಚಾರ ನಡೆಸಲಾಗುತ್ತಿದೆ. ಧರ್ಮ, ಜಾತಿಗಳನ್ನು ಪರಿಗಣಿಸದೆ ದೇಶವಾಸಿಗಳ ಅಭಿವೃದ್ಧಿಗೆ ಮೋದಿಯವರು ಪಣ ತೊಟ್ಟಿದ್ದಾರೆ. ಆದರೆ ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲ ಪರ ರಾಷ್ಟ್ರಗಳು ನಮ್ಮ ಸರ್ಕಾರ ಮತ್ತು ದೇಶದ ಹೆಸರು ಕೆಡಿಸಲು ಪ್ರಯತ್ನಿಸುತ್ತಿವೆ’, ಎಂದು ಹೇಳಿದ್ದಾರೆ.
ನಿಮ್ಮ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿರುವ ವಿದೇಶಗಳು ಮತ್ತು ರಾಜಕೀಯ ಪಕ್ಷಗಳ ಹೆಸರನ್ನು ಹೇಳಿ ಎಂದಾಗ ಕಾಲ ಬಂದಾಗ ಇದನ್ನು ಬಹಿರಂಗ ಪಡಿಸುತ್ತೇನೆ ಎಂದು ವರ್ಗಿಯಾ ಜಾರಿಕೊಂಡರು.
ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯನ್ನು ಉಲ್ಲೇಖಿಸಿದ ಅವರು ಜನರ ಹಿತಕ್ಕಾಗಿ ಬಿಜೆಪಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹೋರಾಡಲಿದೆ ಎಂದಿದ್ದಾರೆ ವರ್ಗಿಯಾ.