ನಾಗಪುರ,ನ.17: ಮಹಾರಾಷ್ಟ್ರದ ವಿದರ್ಭದಲ್ಲಿ ಕೃಷಿ ಬಿಕ್ಕಟ್ಟು ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ನವೆಂಬರ್ನಲ್ಲಿ ಈವರೆಗೆ ಆತ್ಮಹತ್ಯೆಗೆ ಶರಣಾದ ಅನ್ನದಾತರ ಸಂಖ್ಯೆ 43ಕ್ಕೇರಿದೆ. ಕಳೆದ ತಿಂಗಳಲ್ಲಿ ಈ ಪ್ರದೇಶದಲ್ಲಿ 57 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಮರಾವತಿ ಜಿಲ್ಲೆಯ ಸಾವ್ಲಾ ಗ್ರಾಮದ ಬಬನ್ ಮಾಡವಿ ಮತ್ತು ಯೆವ್ಡಾ ಗ್ರಾಮದ ಗಣೇಶ ಕಾಳೆ,ಯವತ್ಮಾಲ್ ಜಿಲ್ಲೆಯ ಫೆಟ್ರಾದ ಭಗವಾನ ಲೋಂಡೆ ಹಾಗೂ ಚಂದ್ರಾಪುರ ಜಿಲ್ಲೆಯ ಸುಮ್ಥಾನಾದ ಯಾದವ ಪಿಂಗೆ ಆತ್ಮಹತ್ಯೆ ಮಾಡಿಕೊಂಡ ರೈತರು.
ಈ ಪೈಕಿ ಮೂವರು ಹತ್ತಿ ಬೆಳೆಗಾರರಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ತಮ್ಮ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದರು. ಬಿಜೆಪಿ ನೇತೃತ್ವದ ಸರಕಾರವು ರೈತರಿಗೆ ತಾನು ನೀಡುತ್ತಿರುವ ನೆರವಿನ ಬಗ್ಗೆ ಹೇಳಿಕೊಳ್ಳುತ್ತಿರುವ ಈ ಸಂದರ್ಭದಲ್ಲಿಯೇ ಆತ್ಮಹತ್ಯೆಗಳು ಸುದ್ದಿಯಾಗುತ್ತಿವೆ. ಚಂದ್ರಾಪುರ ಹೊರತುಪಡಿಸಿ ಇತರ ಎರಡು ಜಿಲ್ಲೆಗಳಲ್ಲಿ ವಿಶೇಷ ಪರಿಹಾರ ಪ್ಯಾಕೇಜ್ಗಳನ್ನು ಪ್ರಕಟಿಸಲಾಗಿದೆ.
ಕಳೆದ ವಾರ ಹತ್ತಿಯ ಖರೀದಿಯನ್ನು ಆರಂಭಿಸಿರುವ ಖಾಸಗಿ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ 4,000 ರೂ.ದರದಲ್ಲಿ ಸುಮಾರು 1.5ಲಕ್ಷ ಕ್ವಿಂಟಲ್ ಹತ್ತಿಯನ್ನು ಖರೀದಿಸಿದ್ದು, ಈ ದರ ಕೇಂದ್ರ ಸರಕಾರವು ನಿಗದಿಗೊಳಿಸಿರುವ ಕನಿಷ್ಠ ಬೆಂಬಲ ಬೆಲೆ 4,100 ರೂ.ಗಿಂತ ಕಡಿಮೆಯಾಗಿದೆ.