ಹೈದರಾಬಾದ್, ನ.16-ರಕ್ತಚಂದನದ ಅಂತಾರಾಷ್ಟ್ರೀಯ ಕಳ್ಳಸಾಗಾಣಿಕೆದಾರ ಕೊಲ್ಲಮ್ ಗಂಗೀರೆಡ್ಡಿಯನ್ನು ಮಾರಿಷಸ್ ಭಾರತಕ್ಕೆ ಹಸ್ತಾಂತರಿಸಿದೆ. ರಕ್ತ ಚಂದನದ ಕಳ್ಳ ಸಾಗಾಣೆ ದಂಧೆಯ ಸಂಪತ್ತಿನ ಚಕ್ರಾಧಿಪತ್ಯ ಸ್ಥಾಪಿಸಿದ್ದ ಈತ ಸಾವಿರ ಕೋಟಿಗೂ ಹೆಚ್ಚು ಆಸ್ತಿ-ಪಾಸ್ತಿ ಹೊಂದಿದ್ದಾರೆ.
ಮಾರಿಷಸ್ನಲ್ಲಿ ನೆಲೆಸಿದ್ದ ಈತನನ್ನು ಭಾರತಕ್ಕೆ ಗಡಿಪಾರು ಮಾಡಿಕೊಳ್ಳುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದು, ಇಂದು ಆತನನ್ನು ಕಡಪ ಜಿಲ್ಲೆಯ ಪೊದ್ದುಟೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಗಂಗೀರೆಡ್ಡಿ 2003ರಲ್ಲಿ ತಿರುಪತಿ-ತಿರುಮಲ ಬೆಟ್ಟದ ಹಾದಿಯಲ್ಲಿ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕೊಲ್ಲಲು ಯತ್ನಿಸಿದ್ದ.