ಹೊಸದಿಲ್ಲಿ, ನ.12: ಬಿಜೆಪಿಯ ಹಳೆಯ ಮತ್ತು ಹೊಸ ತಲೆಗಳ ನಡುವಿನ ಕಂದಕ ಮತ್ತಷ್ಟು ದೊಡ್ಡದಾಗುತ್ತಿರುವಂತಿದೆ. ಹೊಣೆಗಾರಿಕೆಯನ್ನು ನಿಗದಿಪಡಿಸುವುದರಿಂದ ನಾವು ದೂರ ಓಡಬಾರದು ಎಂದು ಪಕ್ಷದ ಹಿರಿಯ ನಾಯಕ, ಪಾಟ್ನಾ ಸಾಹೀಬ್ ಕ್ಷೇತ್ರದ ಸಂಸದ ಶತ್ರುಘ್ನ ಸಿನ್ಹಾ ಗುರುವಾರ ಹೇಳಿದ್ದಾರೆ.
‘‘ನನ್ನ ಸ್ನೇಹಿತರು, ಅಭಿಮಾನಿಗಳು, ಮತದಾರರು ಹಾಗೂ ಬೆಂಬಲಿಗರ ಹೆಚ್ಚು ಹುಮ್ಮನಸ್ಸಿನ ಭಾಗವಹಿಸುವಿಕೆಯು ಖಂಡಿತವಾಗಿಯೂ ಕೆಲವು ಕ್ಷೇತ್ರ ಗಳಲ್ಲಾದರೂ ವ್ಯತ್ಯಾಸವನ್ನು ಮಾಡಲು ಸಹಾಯವಾಗಬಹುದಿತ್ತು. ಆದರೆ, ಈಗ ಜನಾದೇಶ ಪ್ರಕಟವಾಗಿದೆ ಹಾಗೂ ನಾವು ಈ ನಗೆಪಾಟಲಿನ ಸೋಲಿನಿಂದ ದುಃಖಿತರಾಗಿದ್ದೇವೆ. ಹೊಣೆಗಾರಿಕೆಯನ್ನು ನಿಗದಿಪಡಿಸುವುದರಿಂದ ನಾವು ದೂರ ಓಡಬಾರದು’’ ಎಂದು ಸಿನ್ಹಾ ಟ್ವೀಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಹೆಸರೆತ್ತದೆಯೇ ಪಕ್ಷದ ಹಿರಿಯರು ಅವರನ್ನು ಬಿಹಾರದ ಸೋಲಿಗೆ ಹೊಣೆಗಾರರನ್ನಾಗಿಸಿದ್ದಾರೆ.
ಬಿಹಾರದ ಸೋಲಿಗೆ ಪ್ರತಿಯೊಬ್ಬರೂ ಕಾರಣವೆನ್ನುವುದು ಯಾರನ್ನೂ ಹೊಣೆಮಾಡದಂತೆ ಖಚಿತಪಡಿಸಲಿಕ್ಕಾಗಿದೆ. ಗೆಲ್ಲುತ್ತಿದ್ದರೆ ಅದರ ಶ್ರೇಯಸ್ಸು ತಮ್ಮದೆ ನ್ನುತ್ತಿದ್ದ ನಾಯಕರು ಬಿಹಾರದ ವಿನಾಶಕಾರಿ ಸೋಲಿನ ಹೊಣೆಯನ್ನು ಜಾರಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಇದು ತೋರಿಸುತ್ತಿದೆಯೆಂದು ಬಿಜೆಪಿಯ ಹಿರಿದಲೆಗಳು ಹೊರಡಿಸಿರುವ ಹೇಳಿಕೆಯೊಂದು ಟೀಕಿಸಿದೆ.
ಶತ್ರುಘ್ನ ಸಿನ್ಹಾ ಪಕ್ಷದ ನಾಯಕತ್ವವನ್ನು ಟೀಕಿಸಿ ಮೋದಿ ಪಾಳಯದ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್ಜೆಡಿ ನಾಯಕ ಲಾಲುಪ್ರಸಾದರನ್ನು ಸಿನ್ಹಾ ಭೇಟಿಯಾದುದು ಪಕ್ಷಕ್ಕೆ ಸರಿಕಂಡಿಲ್ಲ.
ತನಗೆ ಬೆಂಬಲವಿದ್ದ ಹೊರತಾಗಿಯೂ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲು ಅವಕಾಶ ನೀಡಿಲ್ಲವೆಂಬುದನ್ನು ಸಿನ್ಹಾ ಸರಣಿ ಟ್ವೀಟ್ಗಳಲ್ಲಿ ಬೆಟ್ಟುಮಾಡಿದ್ದಾರೆ.
‘‘ಪ್ರಾಮಾಣಿಕತೆ, ಪ್ರಯತ್ನ ಹಾಗೂ ಉದ್ದೇಶವಿದ್ದಾಗಲೂ ಬಿಹಾರಿ ಬಾಬುವನ್ನು ಪ್ರಚಾರ ಕಾರ್ಯದಿಂದ ದೂರವುಳಿಸಲಾಗಿದೆ. ನನ್ನ ಮಿತ್ರರನ್ನು, ಮತದಾರರನ್ನು ಹಾಗೂ ಬೆಂಬಲಿಗರನ್ನು ನಿರ್ಲಕ್ಷಿಸಲಾಗಿದೆ. ನಾನೊಬ್ಬ ರಾಜ್ಯಸಭಾ ಸದಸ್ಯನಲ್ಲ. ನಾನು ಜನತೆಯ ಬೆಂಬಲದಿಂದ ಮೇಲೆ ಬಂದವನು. ದಾಖಲೆ ಅಂತರದಲ್ಲಿ 2 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೇನೆ. ನಾನು ಬೆಂಬಲದ ನೆಲೆ ಹೊಂದಿದ್ದೇನೆ’’ ಎಂದವರು ಹೇಳಿದ್ದಾರೆ.
ಬಿಜೆಪಿಯ ತಾರಾ ಪ್ರಚಾರಕರೆಂದು ಹೆಸರಿಸಲಾಗಿದ್ದರೂ, ಸಿನ್ಹಾ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹಾಗೂ ಎಂ.ಎಂ. ಜೋಶಿ ಬಿಹಾರ ಚುನಾವಣಾ ಪ್ರಚಾರದಲ್ಲೆಲ್ಲೂ ಕಾಣಿಸಿಕೊಂಡಿಲ್ಲ.
ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ಸಿನ್ಹಾ, ತಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಿದ್ದರೆ ಫಲಿತಾಂಶ ಬೇರಾಗಲು ಸಾಧ್ಯವಿತ್ತೆಂದು ತಾನು ಹೇಳಿದ್ದೇನೆಂಬ ಭಾವನೆಯನ್ನು ಅವು ಸೃಷ್ಟಿಸುತ್ತಿವೆ. ತಾನೆಂದೂ ಆ ರೀತಿ ಹೇಳಿಲ್ಲ. ತಾನು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರೀಕ್ಷೆ ಹೊಂದಿರಲಿಲ್ಲ. ತನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದರೆ, ಉತ್ತಮ ಫಲಿತಾಂಶ ಬರಬಹುದಿತ್ತೆಂದಷ್ಟೇ ತಾನು ಹೇಳಿದ್ದೇನೆಂದು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ