ನವದೆಹಲಿ: ನನ್ನನ್ನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು ಎಂದು ನಾನು ಎಲ್ಲಿಯೂ ಹೇಳಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿಯ ಸಂಸದ ಹಾಗೂ ಚಿತ್ರನಟ ಶತ್ರುಘ್ನ ಸಿನ್ಹಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
ನಾನು ಮೂಲತಹ ಬಿಹಾರದ ಮಣ್ಣಿನ ಮಗನಾದ್ದರಿಂದ ಪಕ್ಷದ ವರಿಷ್ಠರು ಚುನಾವಣಾ ಪ್ರಚಾರಕ್ಕೆ ಕರೆದಿದ್ದರೆ ಫಲಿತಾಂಶವೇ ಬೇರೆ ಇರುತ್ತಿತ್ತು ಎಂದಷ್ಟೆ ನಾನು ಹೇಳಿದ್ದೇನೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಬಿಹಾರದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಹೊಣೆಯಿಂದ ಯಾರು ನುಣುಚಿಕೊಳ್ಳುವಂತಿಲ್ಲ, ಒಂದು ವೇಳೆ ಪಕ್ಷ ನನ್ನನ್ನು ಪ್ರಚಾರಕ್ಕೆ ಕರೆದಿದ್ದರೆ ನನ್ನ ಸಿನಿಮಾ ವರ್ಚ್ಚಸು ಬೇರೆಯದೇ ಫಲಿತಾಂಶ ನೀಡುತ್ತಿತ್ತೇನೊ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಇದನ್ನು ಮಾತ್ರ ಮಾಧ್ಯಮಗಳ ಮುಂದೆ ಹೇಳಿದ್ದೇನೆ ಎಂದರು.
ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡು ಪ್ರಕಟಿಸಿದರೆ ನಾನೇನೂ ಮಾಡಲಿ ಎಂದರು. ಒಟ್ಟಾರೆ ಬಿಹಾರದ ಫಲಿತಾಂಶದಿಂದ ನನಗೂ ನೋವುಂಟಾಗಿದೆ, ಸಾಮೂಹಿಕ ಸಂಘಟನೆ ಮತ್ತು ನಾಯಕರಲ್ಲಿ ಜವಾಬ್ದಾರಿ ಇದ್ದಿದ್ದರೆ ಈ ಸೋಲಾಗುತ್ತಿರಲಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದು ಸಿನ್ಹಾ ತಿಳಿಸಿದ್ದಾರೆ.