ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿದ ವ್ಯಕ್ತಿ ಈಗ ಬಾರಿ ಬಿಹಾರದಲ್ಲಿ ಸೋಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಪಾಳೆಯದಲ್ಲಿ ಗುರುತಿಸಿದ ಟೆಕ್ಕಿ ಪ್ರಶಾಂತ್ ಕಿಶೋರ್ ಈ ಬಾರಿ ನಿತೀಶ್ ಕುಮಾರ್ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು. 2012ರ ಗುಜರಾತ್ ವಿಧಾನಸಭಾ, 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪಾಳೆಯದ ಉಸ್ತುವಾರಿ ಆಗಿದ್ದ ಪ್ರಶಾಂತ್ ಕಿಶೋರ್ ಈ ಬಾರಿ ನಿತೀಶ್ ಕುಮಾರ್ ಅವರ ಜೆಡಿಯು ಪರ ಪ್ರಚಾರ ಮಾಡಿದ್ದರು. ಅಮಿತ್ ಷಾ ತಂಡದ ಜೊತೆ ಮುನಿಸಿಕೊಂಡು ಮೇ ತಿಂಗಳಿನಲ್ಲಿ ನಿತೀಶ್ ಪಾಳಯ ಸೇರಿದ್ದ ಪ್ರಶಾಂತ್ ಇಂಡಿಯಾ ಪಾಲಿಟಿಕಲ್ ಆಕ್ಷನ್ ಕಮಿಟಿ ರಚಿಸಿ ನಿತೀಶ್ ಪರ ಪ್ರಚಾರದಲ್ಲಿ ತೊಡಗಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ನಿತೀಶ್ ಕುಮಾರ್ ಪರ ಪ್ರಚಾರ ಮಾಡಿದ್ದ ಇವರ ತಂಡ ಬಿಹಾರದಲ್ಲಿ ನಿತೀಶ್ ಪರ ಹೊಸ ಘೋಷಣೆಗಳನ್ನು ಸೃಷ್ಟಿಸಿತ್ತು. ‘ಫಿರ್ ಏಕ್ ಬಾರ್-ನಿತೀಶ್ ಸರ್ಕಾರ್’, `ಹರ್ ಘರ್ ದಸ್ತಕ್’, `ಭಡ್ ಚಲಾ ಬಿಹಾರ್’ ಘೋಷಣೆ’ ರೂಪಿಸಿತ್ತು. ಟೆಲಿವಿಷನ್ ಸೆಟ್, ಮ್ಯೂಸಿಕ್ ಸಿಸ್ಟಮ್ ಒಳಗೊಂಡ 400 ಟ್ರಕ್ ಪ್ರಚಾರವನ್ನು ನಡೆಸಿದ್ದರು.
ಪ್ರಶಾಂತ್ ಕಿಶೋರ್ ತಂಡ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದ ಅವರ ಫೇಸ್ ಬುಕ್, ಟ್ವಿಟ್ಟರ್ ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ವಹಿಸುತ್ತಿತ್ತು. ಅಷ್ಟೇ ಅಲ್ಲದೇ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ಆರೋಪಗಳಿಗೆ ಈ ತಂಡ ತಿರುಗೇಟು ನೀಡುತ್ತಿತ್ತು. ಬಿಜೆಪಿ ಹೆಚ್ಚಾಗಿ ಪತ್ರಿಕೆ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರೆ, ಪ್ರಶಾಂತ್ ಕಿಶೋರ್ ರೇಡಿಯೋ ಮಾಧ್ಯಮದಲ್ಲಿ ಮೊರೆ ಹೋಗಿದ್ದರು.
37 ವರ್ಷದ ಪ್ರಶಾಂತ್ ಈ ಹಿಂದೆ ವಿಶ್ವಸಂಸ್ಥೆಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು 2012ರಲ್ಲಿ ಈ ಉದ್ಯೋಗಕ್ಕೆ ರಾಜೀನಾಮೆ ನೀಡಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಚಯ್ ಪೇ ಚರ್ಚಾ ಎನ್ನುವ ಹೊಸ ಅಭಿಯಾನವನ್ನು ಆರಂಭಿಸಿದ ಕೀರ್ತಿ ಪ್ರಶಾಂತ್ ಅವರಿಗೆ ಸಲ್ಲುತ್ತದೆ.
ಎಂಬಿಎ ಪದವಿಧರರು ಮತ್ತು ಐಟಿ ತಜ್ಞರನ್ನು ಒಳಗೊಂಡ ಇವರ ತಂಡ ಹೆಚ್ಚಾಗಿ ಐಐಟಿ ಪದವಿಧರರಿದ್ದಾರೆ. ಈ ಹಿಂದೆ ಇವರ ತಂಡ ಕೆಲ ಕಾಲ ರಾಹುಲ್ ಗಾಂಧಿ ಪರ ಉತ್ತರ ಪ್ರದೇಶದ ಅಮೇಠಿಯಲ್ಲೂ ಪ್ರಚಾರ ಕೈಗೊಂಡಿತ್ತು.