ಮಂಗಳೂರು : ನೂತನ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಇತ್ತೀಚಿಗೆ ಕೈದಿಗಳಿಬ್ಬರ ಕೊಲೆ ನಡೆದ ಜಿಲ್ಲಾ ಕಾರಾಗೃಹಕ್ಕೆ ಬಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೋಡಿ ಕೊಲೆಯ ಕುರಿತು ಪೊಲೀಸರಿಂದ ಮಾಹಿತಿ ಪಡೆದರು.
ಬಳಿಕ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದೇನೆ. ಜೊತೆಗೆ ಇಲ್ಲಿನ ಕಮಿಷನರೇಟ್ ಹಾಗೂ ಪೊಲೀಸ್ ಇಲಾಖೆಯ ಸಭೆಯಲ್ಲಿ ಭಾಗವಹಿಸಲು ಬಂದಿದ್ದು, ಜಿಲ್ಲಾ ಕಾರಾಗೃಹದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಜೋಡಿ ಕೊಲೆ ನಡೆದಿರುವುದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದೇನೆ ಎಂದರು.
ಜೈಲಿನಲ್ಲಿ ನಡೆದಿರುವ ಕೈದಿಗಳ ಕೊಲೆ ಪ್ರಕರಣದ ಕುರಿತು ಸೂಕ್ತ ತನಿಖೆ ಮಾಡಲಾಗುವುದು. ಅಲ್ಲದೇ ಜಿಲ್ಲಾ ಕಾರಾಗೃಹದ ಒಳಗೆ ಮಾರಕಾಯುಧಗಳು ಹೇಗೆ ಬಂದವು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಎಡಿಜಿಪಿ ಕಮಲ್ ಪಂತ್ ಆದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಸಭ್ ಜೈಲ್ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಸೆಕ್ಯೂರಿಟಿ ಫೋರ್ಸ್ ನ 25 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಜೈಲಿನಲ್ಲಿ ಕೈದಿಗಳಿಗೆ ಎಲ್ಲಾ ಸೌಲಭ್ಯಗಳು ಉತ್ತಮವಾಗಿದೆ. ಕೈದಿಗಳ ಊಟದ ವ್ಯವಸ್ಥೆಗಾಗಿ 26 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ. ಹಳೆಯ ಕಟ್ಟಡವನ್ನೂ ಬದಲಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಸಿಸಿ ಟಿವಿ ಹಾಗೂ ಮೊಬೈಲ್ ಜಾಮರ್ ಗಳನ್ನು ಅಳವಡಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಮಂಗಳೂರಿನ ಜನತೆ ಶಾಂತಿಯಿಂದ ಬದುಕಿದವರು. ಅನೈತಿಕ ಪೊಲೀಸ್ ಗಿರಿ ನಡೆಸುವುದು ಸರಿಯಲ್ಲ. ಯಾವುದೇ ಸಮಸ್ಯೆಗಳು ಬಂದಾಗ ಪೊಲೀಸರ ಮೂಲಕ ಪರಿಹಾರಕ್ಕೆ ಯತ್ನಿಸಬೇಕು. ಕಾನೂನನ್ನು ಕೈಗೆತ್ತಿ ಕೊಳ್ಳುವವರ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಲು ನಾನೀಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಂತಹ ಘಟನೆಗಳನ್ನು ಹತ್ತಿಕ್ಕಲು ಪೊಲೀಸರು ವಿಫಲರಾದರೆ ಅದಕ್ಕೆ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದು ತಿಳಿಸಿದರು.
ಮಂಗಳೂರು ಜೈಲು ತುಂಬಾ ಹಳೆಯದಾಗಿದ್ದು ಬ್ರಿಟಿಷರ ಕಾಲದ್ದಾಗಿದೆ. ಆಧುನಿಕ ಜೈಲುಗಳಲ್ಲಿರುವ ವ್ಯವಸ್ಥೆಗಳು ಇಲ್ಲಿಲ್ಲ. ಜೈಲಿನಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ. ನೂತನ ಜೈಲು ನಿರ್ಮಾಣದ ಚಿಂತನೆಯಲ್ಲಿದ್ದು, ಕೊಣಾಜೆ ಸಮೀಪ ಇದಕ್ಕಾಗಿ ಭೂಮಿ ಪಡೆಯಲಾಗಿದೆ. ಕೊಣಾಜೆಯಲ್ಲಿ 40 ಎಕರೆ ಜಾಗವನ್ನು ಈಗಾಜೆ ಜೈಲು ನಿರ್ಮಾಣಕ್ಕೆ ಖರೀದಿಸಲಾಗಿದೆ. ಮುಂದಿನ ಬಜೆಟ್ ನಲ್ಲಿ ಜೈಲು ನಿರ್ಮಾಣಕ್ಕೆ ಅನುದಾನವನ್ನಿಡುವಂತೆ ಹಣ ಕಾಸುಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಬಿ. ರಮಾನಾಥ ರೈ, ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೂಡದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಗಫೂರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.