ನವದೆಹಲಿ: ಅಂತೂ ಇಂತೂ 26 ವರ್ಷಗಳ ಬಳಿಕ ಭೂಗತ ಪಾತಕಿ ಡಾನ್ ಛೋಟಾ ರಾಜನ್ ಭಾರತಕ್ಕೆ ಕರೆತಂದಿದ್ದಾರೆ. ನಿನ್ನೆ ಇಂಡೋನೇಷ್ಯಾದ ಬಾಲಿಯಿಂದ ಛೋಟಾ ರಾಜನ್ ಸಮೇತ ಹೊರಟಿದ್ದ ಭಾರತದ ಸಿಬಿಐ ಅಧಿಕಾರಿಗಳು ಹಾಗೂ ಪೊಲೀಸರು ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ದಿಲ್ಲಿಯ ಪಾಲಂ ಏರ್ಪೋರ್ಟ್ಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ.
ಛೋಟಾ ರಾಜನ್ ಕರೆತರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಭಾರೀ ಭದ್ರತೆ ಮಾಡಲಾಗಿತ್ತು. ವಿಮಾನ ನಿಲ್ದಾಣದ ಸುತ್ತ ನಿಷೇಧಾಜ್ಞೆ ಹೇರಲಾಗಿತ್ತು. ಛೋಟಾ ರಾಜನ್ನಿಂದ ಸಾಕಷ್ಟು ಮಾಹಿತಿ ಕಲೆ ಹಾಕುವ ಉದ್ದೇಶದಿಂದ ನೇರವಾಗಿ ಇಂದು ಸಿಬಿಐ ಕೋರ್ಟ್ಗೆ ಹಾಜರುಪಡಿಸಿ, 14 ದಿನ ಸಿಬಿಐ ಕಸ್ಟಡಿಗೆ ಕೇಳಲಾಗುತ್ತದೆ. ಹೀಗಾಗಿ ಛೋಟಾ ರಾಜನ್ನನ್ನು ದಿಲ್ಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ಇರಿಸಲಾಗಿದ್ದು, ಕಚೇರಿ ಸುತ್ತ ಕೂಡಾ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಛೋಟಾ ರಾಜನ್ ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ ಒಟ್ಟು 75 ಪ್ರಕರಣಗಳು ದಾಖಲಾಗಿವೆ. ವಿದೇಶಕ್ಕೆ ಹಾರಿದ ಪಾಸ್ಪೋರ್ಟ್ನಲ್ಲಿ ಮಂಡ್ಯದ ಮೋಹನ್ಕುಮಾರ್ ಎಂದು ಮೋಸ ಮಾಡಿದ್ದಾನೆ. ಸದ್ಯ ಈ ಪಾಸ್ಪೋರ್ಟ್ ರದ್ಧುಗೊಳಿಸಲಾಗಿದೆ. ಇದಲ್ಲದೇ 4 ಭಯೋತ್ಪಾದನಾ ಪ್ರಕರಣ ಹಾಗೂ 20 ಕೊಲೆ ಕೇಸ್ ಛೋಟಾ ರಾಜನ್ ಮೇಲಿವೆ. ದೆಹಲಿಯೊಂದಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದು, ಕೊಲೆ ಬೆದರಿಕೆ, ಡ್ರಗ್ಸ್ ಮಾಫಿಯಾ ಪ್ರಕರಣಗಳು ರಾಜನ್ ಮೇಲಿವೆ.