ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ವಾತಾವರಣ ಹೆಚ್ಚುತ್ತಿದೆ ಎಂದು ಆರೋಪಿಸುತ್ತಿರುವವರ ವಿರುದ್ಧ ಕಿಡಿಕಾರಿದ ಬಿಜೆಪಿ, ಮೋದಿ ಸರಕಾರದ ಅಭಿವೃದ್ಧಿ ಪಥವನ್ನು ತಡೆಯುವ ನಿಟ್ಟಿನಲ್ಲಿ ಸಂಚು ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ, ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸರಕಾರದ ಕಾರ್ಯಕ್ಕೆ ಅಡ್ಡಿಯಾಗಿದ್ದು ಅಸಹಿಷ್ಣುತೆ ವಾತಾವರಣ ನೆಪವೊಡ್ಡುತ್ತಿವೆ ಎಂದು ಕಿಡಿಕಾರಿದೆ.
ದೇಶದ ಅಭಿವೃದ್ಧಿಯನ್ನು ನಮ್ಮನ್ನು ನಾವೇ ತಡೆಯುವುದು ಎಷ್ಟು ಸರಿ? ಕೆಲವರು ಸರಕಾರದ ಏಳಿಗೆಯ ವಿರುದ್ಧ ಪ್ರತಿಭಟನೆ ನಡೆಸುವುದೇ ತಮ್ಮ ಕಾಯಕವಾಗಿಸಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುಡುಗಿದ್ದಾರೆ.
ದೇಶದಲ್ಲಿ ಯಾವುದೇ ರೀತಿಯ ಅಸಹಿಷ್ಣುತೆ ವಾತಾವರಣವಿಲ್ಲ. ದೇಶದಲ್ಲಿ ಶಾಂತಿ ನೆಲೆಸಿದೆ, ನೆಮ್ಮದಿಯ ವಾತಾವರಣವಿದೆ. ವಿಪಕ್ಷಗಳ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಹಿತಿಗಳು, ವಿಜ್ಞಾನಿಗಳು , ರಾಷ್ಟ್ರಪ್ರಶಸ್ತಿ ವಿಜೇತರಿಗೆ ಅಸಹಿಷ್ಣುತೆ ವಾತಾವರಣದ ಬಗ್ಗೆ ಆತಂಕವಿದ್ದಲ್ಲಿ ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿ. ಪ್ರಧಾನಿ ಮೋದಿ ಚರ್ಚೆಗೆ ಸದಾ ಸಿದ್ದವಾಗಿದ್ದಾರೆ ಎಂದು ಕೇಂದ್ರ ಸಚಿವ ನಾಯ್ಡು ತಿಳಿಸಿದ್ದಾರೆ.