ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ತಮ್ಮ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದತ್ತು ಅವರು ಡಿಸೆಂಬರ್ 2ರಂದು ನಿವೃತ್ತಿಯಾಗುತ್ತಿದ್ದು, ಅದೇ ದಿನ ಠಾಕೂರ್ ಅವರು ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸೇವಾ ಹಿರಿತನವನ್ನು ಆಧಾರಸಿ ದತ್ತು ಅವರು ಠಾಕೂರ್ ಅವರ ಹೆಸರನ್ನು ಶಿಫಾರಸು ಮಾಡಿದ್ದು, ಅವರ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪೂರ್ಣಗೊಳಿಸಬೇಕಿದೆ.
2014, ಸೆಪ್ಟೆಂಬರ್ 28ರಂದು ಕನ್ನಡಿಗ ಎಚ್.ಎಲ್.ದತ್ತು ಅವರು ಸುಪ್ರೀಂ ಕೋರ್ಟ್ನ 42 ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ದತ್ತು ಅವರು ನ್ಯಾಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸಿದ ಕರ್ನಾಟಕದ ನಾಲ್ಕನೇ ನ್ಯಾಯಮೂರ್ತಿ ಮತ್ತು ಬಳ್ಳಾರಿ ಜಿಲ್ಲೆಯ ಮೊದಲಿಗರು. ಇದಕ್ಕೂ ಹಿಂದೆ ರಾಜ್ಯದ ಇ.ಎಸ್. ವೆಂಕಟರಾಮಯ್ಯ (1989), ಎಂ. ಎನ್. ವೆಂಕಟಾಚಲಯ್ಯ (1993), ಎಸ್. ರಾಜೇಂದ್ರ ಬಾಬು (2004) ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.