ಶರೀಫ್, ಅ. 14; ಇಲ್ಲಿ ನಡೆದ ಚುನಾವಣಾ ರ್ಯಾಲಿಯೊಂದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ತಡವಾಗಿ ಆಗಮಿಸಿದುದರಿಂದ ರೊಚ್ಚಿಗೆದ್ದ ಜನರು ಕಲ್ಲು ತೂರಾಟ ಆರಂಭಿಸಿದಾಗ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದಾಗಿ ಕೆಲವು ಪೊಲೀಸರ ಸಹಿತ ಸುಮಾರು 12 ಮಂದಿ ಗಾಯಗೊಂಡಿದ್ದಾರೆ.
ಮೈದಾನದಲ್ಲಿ ಭಾರೀ ಜನ ಸಂದಣಿ ಕೂಡಿತ್ತು. ಆದರೆ, ದೇವಗನ್ರ ಆಗಮನದ ಯಾವುದೇ ಸೂಚನೆ ಕಾಣದಿದ್ದಾಗ ಜನಸಂದಣಿಯನ್ನು ನಿಯಂತ್ರಿಸುವುದೇ ಕಷ್ಟವಾಯಿತು. ಕೊನೆಗೂ ಅವರು ಪೂರ್ವಾಹ್ನ 10ರ ಬದಲಿಗೆ ಮಧ್ಯಾಹ್ನ 1ರ ಸುಮಾರಿಗೆ ಬಂದರೆಂದು ಪೊಲೀಸ್ ಅಧೀಕ್ಷಕ ವಿವೇಕಾನಂದ ಕುಮಾರ್ ತಿಳಿಸಿದರು.ಗುಂಪು ಪೊಲೀಸರತ್ತ ಕುರ್ಚಿ ಹಾಗೂ ಕಲ್ಲುಗಳೆನ್ನೆಸೆದು ಆಕ್ರೋಶ ಪ್ರದರ್ಶಿಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು.
ಈ ಗೊಂದಲದಲ್ಲಿ ಪೊಲೀಸರು ಸಹಿತ ಕನಿಷ್ಠ 12 ಮಂದಿ ಗಾಯಗೊಂಡರೆಂದು ಅವರು ವಿವರಿಸಿದರು.ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಪ್ರಚಾರ ಸಭೆಯಲ್ಲಿ ಭಾಷಣ ಮಾಡಬೇಕಿದ್ದ ದೇವಗನ್, ಕೆಳಗಿಳಿಯದೆ ಹೆಲಿಕಾಪ್ಟರ್ನಿಂದಲೇ ಜನರತ್ತ ಕೈ ಬೀಸಿದರೆಂದು ಕುಮಾರ್ ತಿಳಿಸಿದರು.ಲಖಿಸರಾಯಿ ಹಾಗೂ ಖಗರಿಯಾಗಳಲ್ಲಿ ಅಜಯ್ ದೇವಗನ್ರ ಕಾರ್ಯಕ್ರಮಗಳಲ್ಲೂ ಕೋಲಾಹಲದ ದೃಶ್ಯಗಳು ಈ ಮೊದಲು ಕಾಣಿಸಿದ್ದವು.