ಲಖ್ನೋ,ಅ.9:ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎಸ್ಪಿ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಉತ್ತೇಜಿತರಾಗಿದ್ದಾರೆ ಎಂದು ಶುಕ್ರವಾರ ಇಲ್ಲಿ ಒತ್ತಿ ಹೇಳಿದ ಬಿಎಸ್ಪಿ ವರಿಷ್ಠೆ ಮಾಯಾವತಿ, ಸಂಘಪರಿವಾರವು ಭಾರತವನ್ನು ‘ಹಿಂದೂ ರಾಷ್ಟ್ರ ‘ವೆಂದು ಘೋಷಿಸಲು ಪ್ರಯತ್ನಿಸುತ್ತಿದೆ ಮತ್ತು ಅವರು ಯಶಸ್ವಿಯಾದರೆ ಜನರ ಹಿತಾಸಕ್ತಿ ಸುರಕ್ಷಿತವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಎಸ್ಪಿ ಸ್ಥಾಪಕ ಕಾನ್ಶಿರಾಂ ಅವರ ಪುಣ್ಯತಿಥಿಯ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಅಧಿಕಾರಕ್ಕೆ ಬಂದ ನಂತರ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ತಾವು ಬಯಸಿರುವುದಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಂವಿಧಾನವು ದೇಶದಲ್ಲಿ ವಾಸವಾಗಿರುವ ಎಲ್ಲ ಧರ್ಮಗಳ ಜನರ ಬಗ್ಗೆ ಕಾಳಜಿ ವಹಿಸಿದೆ,
ಆದ್ದರಿಂದಲೇ ದೇಶವನ್ನು ಹಿಂದೂ ರಾಷ್ಟ್ರವೆಂದು ಮಾನ್ಯತೆ ನೀಡಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ಗಳು ಅದನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಿದರೆ ದಲಿತರು ಮತ್ತು ಆದಿವಾಸಿಗಳ ಹಿತಾಸಕ್ತಿಗಳು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದರು.
ಆರೆಸ್ಸೆಸ್ ವಿರುದ್ಧ ಕಿಡಿ ಕಾರಿದ ಅವರು ಪುನರ್ ಪರಿಶೀಲನೆಯ ನೆಪದಲ್ಲಿ ಶೋಷಿತರಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.