ಹೊಸದಿಲ್ಲಿ, ಸೆ.23: ಭಾರತದ ಟೆಸ್ಟ್ ಬೌಲರ್ ಇಶಾಂತ್ ಶರ್ಮರನ್ನು ದಿಲ್ಲಿಯ ರಣಜಿ ಟ್ರೋಫಿ ತಂಡದಿಂದ ಹೊರಗಿಡಲಾಗಿದೆ. ದಿಲ್ಲಿ ರಣಜಿ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ವಿನಯ್ ಲಾಂಬಾರ ಮೆಸೇಜ್ ಹಾಗೂ ಕರೆಗಳಿಗೆ ಇಶಾಂತ್ ಸ್ಪಂದಿಸದೇ ಇದ್ದ ಕಾರಣ ಅವರನ್ನು ರಣಜಿ ತಂಡದಿಂದ ಕೈಬಿಡುವ ದಿಟ್ಟ ನಿರ್ಧಾರಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಶಾಂತ್ ನಮ್ಮ ತಂಡದ ಹಿರಿಯ ಬೌಲರ್. ಅವರ ಬಗ್ಗೆ ನಾವು ಏನು ಹೇಳಲು ಸಾಧ್ಯ. ನಾವು ಅವರನ್ನು ನಿನ್ನೆ ಸಂಪರ್ಕಿಸಲು ಯತ್ನಿಸಿದ್ದೆವು. ಆದರೆ, ಅವರಿಂದ ಪ್ರತಿಕ್ರಿಯೆ ಬರಲಿಲ್ಲ ಎಂದು ಲಾಂಬಾ ತಿಳಿಸಿದ್ದಾರೆ.
ಇಶಾಂತ್ ದಕ್ಷಿಣ ಆಫ್ರಿಕ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಆಯ್ಕೆಯಾಗಿಲ್ಲ. ನವೆಂಬರ್ ಮೊದಲ ವಾರ ಆರಂಭವಾಗಲಿರುವ ಆಫ್ರಿಕ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಮೊದಲು ಇಶಾಂತ್ಗೆ ರಣಜಿಯಲ್ಲಿ ಕೆಲವು ಪಂದ್ಯಗಳನ್ನು ಆಡಲು ಸಮಯಾವಕಾಶವಿತ್ತು. ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಇಶಾಂತ್ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಒಂದು ಪಂದ್ಯದಿಂದ ಅಮಾನತುಗೊಂಡಿದ್ದರು.
ಗೌತಮ್ ಗಂಭೀರ್ ನಾಯಕತ್ವದ ದಿಲ್ಲಿ ತಂಡದಿಂದ ಆಲ್ರೌಂಡರ್ ರಜತ್ ಭಾಟಿಯಾರನ್ನು ಕೈಬಿಡಲಾಗಿದೆ. ಆಲ್ರೌಂಡರ್ ಪವನ್ ನೇಗಿ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿವಾದದ ನಡುವೆಯೂ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ದಿಲ್ಲಿ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ದಿಲ್ಲಿ ತಂಡ: ಗೌತಮ್ ಗಂಭೀರ್(ನಾಯಕ), ಉನ್ಮುಕ್ತ್ ಚಂದ್(ಉಪ ನಾಯಕ), ಮೋಹಿತ್ ಅಹ್ಲಾವತ್, ಪರ್ವಿಂದರ್ ಅವಾನ, ಸುಮಿತ್ ನರ್ವಾಲ್, ಪ್ರದೀಪ್ ಸಾಂಗ್ವಾನ್, ಪವನ್ ಸುಯಾಲ್, ಸರಂಗ್ ರಾವತ್, ವೈಭಬ್ ರಾವತ್, ಮಿಲಿಂದ್ ಕುಮಾರ್, ಕ್ಷಿತಿಜ್ ರಾಣಾ, ಯೋಗೇಶ್ ನಗರ್, ಧುೃವ್ ಶೌರ್ಯ, ಮನನ್ ಶರ್ಮ.