ಹೊಸದಿಲ್ಲಿ, ಸೆ.22: ಇಂದಿರಾ ಗಾಂಧಿ 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆರೆಸ್ಸೆಸ್ ಬೆಂಬಲಿಸಿತ್ತು ಎನ್ನುವ ಅಂಶವನ್ನು ಗುಪ್ತಚರ ಸಂಸ್ಥೆ(ಐಬಿ)ಯ ಮಾಜಿ ಮುಖ್ಯಸ್ಥ ಟಿ. ವಿ. ರಾಜೇಶ್ವರ್ ಬಹಿರಂಗ ಪಡಿಸಿದಾರೆ.
ಆರೆಸ್ಸೆಸ್ನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ‘‘ವೌನವಾಗಿ ಪ್ರಧಾನಿ ನಿವಾಸದೊಂದಿಗೆ ಸಂಪರ್ಕ ಏರ್ಪಡಿಸಿಕೊಂಡು ದೇಶದಲ್ಲಿ ಸುವ್ಯವಸ್ಥೆ ಮತ್ತು ಶಿಸ್ತು ಸ್ಥಾಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಹಲವಾರು ಕ್ರಮಗಳಿಗೆ ಕಟ್ಟಾ ಬೆಂಬಲ ವ್ಯಕ್ತಪಡಿಸಿದ್ದರು’’ ಎಂದು ರಾಜೇಶ್ವರ್ ಹೇಳಿಕೊಂಡರು.
‘‘ಆರೆಸ್ಸೆಸ್ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು. ಅದು ತುರ್ತು ಪರಿಸ್ಥಿತಿಗೆ ವಿರುದ್ಧವಾಗಿರಲಿಲ್ಲ. ಅವರು ಬೆಂಬಲ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿಯೊಂದಿಗೆ ಸಂಪರ್ಕ ಹೊಂದಲೂ ಬಯಸಿದ್ದರು’’ ಎಂದು ಅವರು ನುಡಿದರು.
ಆದೆ ಸಹಕಾರ
ದ ಕೊಡುಗೆಯನ್ನು ಇಂದಿರಾ ತಿರಸ್ಕರಿಸಿದರು, ಯಾಕೆಂದರೆ ತಾನು ಆರೆಸ್ಸೆಸ್ಗೆ ನಿಕಟವಾಗಿದ್ದೇನೆ ಎಂಬಂತೆ ಬಿಂಬಿತವಾಗುವುದು ಅವರಿಗೆ ಬೇಕಿರಲಿಲ್ಲ ಎಂದು ರಾಜೇಶ್ವರ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ರಾಜೇಶ್ವರ್ ಐಬಿಯ ಅತಿ ಹಿರಿಯ ಜಂಟಿ ನಿರ್ದೇಶಕರಾಗಿದ್ದು, ಆ ಕಾಲದ ರಾಜಕೀಯ ಪಕ್ಷಗಳು ಮತ್ತು ಚುನಾವಣೆಗಳನ್ನು ನಿಭಾಯಿಸುತ್ತಿದ್ದರು.ಖಾಸಗಿ ಟಿವಿ ಚಾನೆಲೊಂದಕ್ಕೆ ಸಂದರ್ಶನ ನೀಡಿದ ಅವರು, ಇಂದಿರಾ ಗಾಂಧಿಯವರ ಈ ನಿರ್ಧಾರ ಗುಪ್ತಚರ ಸಂಸ್ಥೆಯನ್ನು ಅಚ್ಚರಿಯಲ್ಲಿ ಕೆಡವಿತ್ತು ಹಾಗೂ ತುರ್ತು ಪರಿಸ್ಥಿತಿ ಹೇರಿಕೆಯ ಬಗ್ಗೆ ಅದು ರೇಡಿಯೊ ಮೂಲಕ ತಿಳಿದುಕೊಂಡಿತು ಎಂದು ತಿಳಿಸಿದರು.
ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೊದಲು ಗುಪ್ತಚರ ಸಂಸ್ಥೆ ಅಥವಾ ಗೃಹ ಸಚಿವಾಲಯದ ಜೊತೆ ಸಮಾಲೋಚನೆ ನಡೆಸಿರಲಿಲ್ಲ ಎಂದು ರಾಜೇಶ್ವರ್ ಹೇಳಿದ್ದಾರೆ.
ಇತ್ತೀಚೆಗೆ ಪ್ರಕಟಗೊಂಡ ತನ್ನ ಪುಸ್ತಕ ‘‘ಇಂಡಿಯಾ ದ ಕ್ರೂಶಿಯಲ್ ಇಯರ್ಸ್’’ನಲ್ಲಿ ರಾಜೇಶ್ವರ್ ಈ ಘಟನೆಯ ಬಗ್ಗೆ ಬರೆದಿದ್ದಾರೆ.
ಬಂಧಿಸಲ್ಪಡಬೇಕಾದ ತನ್ನ ರಾಜಕೀಯ ವಿರೋಧಿಗಳ ಪಟ್ಟಿಯನ್ನು ಇಂದಿರಾ ಗಾಂಧಿ ಸ್ವತಃ ತಯಾರಿಸಿದ್ದರೇ ಎಂಬ ಬಗ್ಗೆ ತನಗೆ ಖಾತರಿಯಿಲ್ಲವಾದರೂ, ಪಟ್ಟಿಯು ಪ್ರಧಾನಿ ನಿವಾಸದಲ್ಲಿ ಸಿದ್ಧಗೊಂಡಿತ್ತು ಎಂದೂ ರಾಜೇಶ್ವರ್ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ಇಂದಿರಾಗೆ ತಿಳಿದಿತ್ತು ಎಂದು ತಾನು ಭಾವಿಸುವುದಾಗಿ ಹೇಳಿದರು. ಯಾಕೆಂದರೆ ಅವರಿಗೆ ನಿಯಮಿತವಾಗಿ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ವರದಿಗಳನ್ನು ಐಬಿ ಕಳುಹಿಸುತ್ತಿತ್ತು ಎಂದರು. ಆದಾಗ್ಯೂ ಏನು ನಡೆಯುತ್ತಿದೆ ಎಂಬುದರ ಗಂಭೀರತೆ ಇಂದಿರಾಗೆ ಸಂಪೂರ್ಣವಾಗಿ ಮನವರಿಕೆಯಾಗಿರಲಿಲ್ಲ ಎಂದು ಹೇಳಿಕೊಂಡರು.
80ರ ದಶಕದ ಆರಂಭದ ಸಿಖ್ ಗಲಭೆಯ ಬಗ್ಗೆ ಮಾತನಾಡಿದ ಅವರು, ಪಂಜಾಬ್ ಮುಖ್ಯಮಂತ್ರಿ ದರ್ಬಾರಾ ಸಿಂಗ್ ಮತ್ತು ಗೃಹಸಚಿವ ಗ್ಯಾನಿ ಝೈಲ್ ಸಿಂಗ್ ಹಲವು ಬಾರಿ ಉಗ್ರಗಾಮಿ ಸಿಖ್ ಬೋಧಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳದಂತೆ ತಡೆದಿದ್ದರು ಎಂದರು. ಈ ಅವಧಿಯಲ್ಲಿ ತಾನು ಐಬಿಯ ನಿರ್ದೇಶಕನಾಗಿದ್ದೆ. ಈ ಬಗ್ಗೆ ಇಂದಿರಾಗೆ ಗುಮಾನಿಯಿತ್ತು, ಆದರೆ, ಸ್ಪಷ್ಟ ಪುರಾವೆ ಇರಲಿಲ್ಲ ಎಂದರು.
1984ರಲ್ಲಿ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸುವ ಒಂದು ವಾರದ ಮೊದಲು, ಹಾಗೆ ಮಾಡದಂತೆ ತಾನು ಇಂದಿರಾ ಗಾಂಧಿಯವರಿಗೆ ಖಚಿತ ಸಲಹೆ ನೀಡಿದ್ದೆ ಎಂದರು.
‘‘ವಿಭಜನೆ ನಂತರದ ಅತ್ಯಂತ ದೊಡ್ಡ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯನ್ನು ಭಾರತ ಎದುರಿಸ ಬೇಕಾಗುತ್ತದೆ ಎಂದು ತಾನು ಹೇಳಿದ್ದೆ’’ ಎಂದರು.