ಚೆನ್ನೈ: “ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಕುರಿತ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನೀಕಾಂತ್ ಅಭಿನಯಿಸಲಿದ್ದಾರೆ ಎಂಬ ಸುದ್ದಿಯಿಂದ ಸೃಷ್ಟಿಯಾಗಿರುವ ವಿವಾದ ಮತ್ತಷ್ಟು ದೊಡ್ಡದಾಗುತ್ತಿದೆ. ಸರ್ವಾಧಿಕಾರಿ, ಕೋಮುವಾದಿಯಾಗಿದ್ದ ಟಿಪ್ಪು ಕುರಿತ ಸಿನಿಮಾದಲ್ಲಿ ರಜನೀ ಅವರು ನಟಿಸಲೇಕೂಡದು ಎಂದು ತಮಿಳುನಾಡಿನ ಹಿಂದುಪರ ಸಂಘಟನೆಗಳು ಹಾಗೂ ಬಿಜೆಪಿ ಆಗ್ರಹಪಡಿಸುತ್ತಿವೆ.
ಈ ನಡುವೆ, ಚಿತ್ರದ ನಿರ್ಮಾಪಕ, ನೈಸ್ ಕಂಪನಿ ಒಡೆಯ, ಕರ್ನಾಟಕದ ಶಾಸಕ ಅಶೋಕ್ ಖೇಣಿ ಅವರು ಈ ವಿಚಾರವಾಗಿ ಪಿಟಿಐ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.
ಟಿಪ್ಪು ಸಿನಿಮಾ ಇನ್ನೂ ಚಿಂತನಾ ಹಂತದಲ್ಲಿದೆ. ಟಿಪ್ಪು ಸುಲ್ತಾನ್ನ ನೈಜ ಕತೆಯನ್ನು ಬ್ರಿಟಿಷರು ತುಳಿದುಹಾಕಿರುವ ಹಿನ್ನೆಲೆಯಲ್ಲಿ ರಜನೀಕಾಂತ್ ಅವರನ್ನು ಬಳಸಿಕೊಂಡು ಟಿಪ್ಪು ಸುಲ್ತಾನ್ ಸಿನಿಮಾ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇನೆ ಅಷ್ಟೆ. ಈ ಕುರಿತು ಚಿತ್ರಕತೆ ತನ್ನಿ ಎಂದಷ್ಟೇ ರಜನೀಕಾಂತ್ ಹೇಳಿದ್ದಾರೆ ಎಂದು ವಿವರಿಸಿದ್ದಾರೆ. ಟಿಪ್ಪು ಹಿಂದು ವಿರೋಧಿ ಅಲ್ಲವೆಂದೂ ಅವರು ವಾದಿಸಿದ್ದಾರೆ.
-ಉದಯವಾಣಿ