ಬಾಲಸೋರ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿದ ಓರ್ವ ಶಾಲಾ ಮುಖ್ಯೋಪಾಧ್ಯಾಯರನ್ನು ಒಡಿಶಾ ಸರಕಾರವು ಅಮಾನತು ಮಾಡಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಔಪಾದಾ ಬ್ಲಾಕ್ಗೆ ಒಳಪಟ್ಟ ಬುಡಖುಂಟ ಯುಜಿಎಂಇ ಶಾಲೆಯಲ್ಲಿ ಈ ಘಟನೆ ಕಳೆದ ಶುಕ್ರವಾರ ನಡೆದಿದೆ. ತರಬೇತಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೇರೊಂದು ಸ್ಥಳಕ್ಕೆ ಹೋಗಿದ್ದ ಈ ಶಾಲೆಯ ಮುಖ್ಯೋಪಾಧ್ಯಾಯರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯ ಶಿಕ್ಷಕರೊಬ್ಬರಿಗೆ ಫೋನ್ ಮಾಡಿ ಸಂತಾಪ ಸೂಚಕ ಸಭೆ ನಡೆಸುವಂತೆ ಸೂಚಿಸಿದ್ದರು ಎಂಬ ವಿಷಯ ಜಿಲ್ಲಾ ಶಿಕ್ಷಣಾಧಿಕಾರಿ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ. ಮಾತ್ರವಲ್ಲದೆ ಶಾಲೆಗೆ ಆ ಪ್ರಯುಕ್ತ ಇಡೀ ದಿನ ರಜೆಯನ್ನು ಕೂಡ ಸಾರಲಾಗಿತ್ತು ಎಂದು ತಿಳಿದುಬಂದಿದೆ.
ಪ್ರಮಾದ ಎಸಗಿರುವ ಶಾಲೆಯ ಮುಖ್ಯೋಪಾಧ್ಯಾಯರು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಬಾಲಸೋರ್ ಜಿಲ್ಲಾ ಸಂಚಾಲಕ ಸುರೇಂದ್ರ ಪ್ರಸಾದ್ ಸಂಖುವಾ ಅವರು ತಿಳಿಸಿದ್ದಾರೆ.
-ಉದಯವಾಣಿ