ಜೈಪುರ,ಸೆ.14- ಜೈನರ ಪವಿತ್ರ ಹಬ್ಬ ಪರ್ಯುೂಶನ್ ಪ್ರಯುಕ್ತ ದೇಶದ ಕೆಲವು ರಾಜ್ಯಗಳಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರ ಮತ್ತೊಂದು ವಿವಾದ ಸೃಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕಿದೆ. ಇದೇ 25ರಂದು ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಅಂದು ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ಸಾರ್ವತ್ರಿಕ ರಜೆ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಬಕ್ರೀದ್ ಹಬ್ಬದ ದಿನದಂದು ಸರ್ಕಾರಿ ರಜೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಅಂದು ಆರ್ಎಸ್ಎಸ್ ಚಿಂತಕ ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ.
ಇದರ ಪ್ರಯುಕ್ತ ಸರ್ಕಾರಿ ಶಾಲಾಕಾಲೇಜುಗಳು, ಕಚೇರಿಗಳಿಗೆ ರಜೆ ನೀಡಬಾರದು, ಅಂದು ದಿನಪೂರ್ತಿ ಯುವಕರು, ಯುವತಿಯರು, ವಿದ್ಯಾರ್ಥಿಗಳು, ಸ್ವಯಂ ರಕ್ತದಾನ ನಡೆಸುವುದರ ಮೂಲಕ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವಂತೆ ಆದೇಶ ಹೊರಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕಾಲೇಜುಗಳಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ರಜೆ ನೀಡಬಾರದು, ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳು ರಜೆ ಘೋಷಿಸಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ವಸುಂಧರಾ ರಾಜೇಯ ಈ ಕ್ರಮ ರಾಜಸ್ಥಾನದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಈವರೆಗೂ ಬಕ್ರೀದ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ನೀಡಲಾಗುತಿತ್ತು. ಇದೀಗ ಬಿಜೆಪಿ ಸರ್ಕಾರ ರದ್ದುಪಡಿಸಿ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆಯನ್ನು ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿರುವುದು ಸಂವಿಧಾನ ವಿರೋಧಿ ಎನ್ನುತ್ತಾರೆ ಪ್ರೊ.ಸಲೀಂ. ಸರ್ಕಾರದ ಕ್ರಮ ಎಲ್ಲ ಹಂತಗಳಲ್ಲೂ ಕೇಸರಿಕರಣಗೊಳಿಸುವುದು ಬಿಜೆಪಿಯ ಹುನ್ನಾರವಾಗಿದೆ. ಕೇವಲ ಹಿಂದೂ ಧರ್ಮವನ್ನು ಮುಖ್ಯವಾಗಿಟ್ಟುಕೊಂಡು ಬೇರೆ ಧರ್ಮಗಳಿಗೆ ಅವಹೇಳನ ಮಾಡುವುದು ಸಂವಿಧಾನದ ವಿರೋಧಿಯಾಗುತ್ತದೆ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಈ ಹಿಂದೆಯೂ ರಾಜಸ್ಥಾನ ಸರ್ಕಾರ ವಿವಾದದ ಹುತ್ತಕ್ಕೆ ಕೈ ಹಾಕಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಸಚಿವ ಕಾಳಿಚರಣ್ ಸರಪ್ ಅವರು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರದ ಮೂಲಕ ಯೋಗಾಸನ ಕಲಿಸಬೇಕೆಂದು ಆದೇಶ ಹೊರಡಿಸಿದ್ದು, ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿತ್ತು.