ಜೆಹನಾಬಾದ್/ಪಟ್ನಾ (ಪಿಟಿಐ): ವಿಧಾನಸಭಾ ಚುನಾವಣೆಗೂ ಮುನ್ನವೇ ಅಕ್ರಮ ಹಣ ಸಾಗಣೆ ಆರೋಪದ ಮೇಲೆ ಬಿಹಾರ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರ ಪುತ್ರ ಪ್ರವೀಣ್ ಕುಮಾರ್ ಅವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು, ವಿಚಾರಣೆ ನಂತರ ಬಿಡುಗಡೆ ಮಾಡಿದ್ದಾರೆ.
ಗಯಾ–ಜೆಹನಾಬಾದ್ ಚೆಕ್ಪೋಸ್ಟ್ ಬಳಿ ಪೊಲೀಸರು ಪ್ರವೀಣ್ ಕುಮಾರ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದ ₹ 4.65 ಲಕ್ಷ ಪತ್ತೆಯಾಗಿತ್ತು. ಈ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರಣ ಪೊಲೀಸರು ಅವರನ್ನು ಮಕ್ದುಂಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.
ನಂತರ ವೈಯಕ್ತಿಕ ಭದ್ರತಾ ಬಾಂಡ್ ಪಡೆದು ಅವರನ್ನು ಬಿಡುಗಡೆ ಮಾಡಿದರು. ಪಟ್ನಾದ ಹನುಮಾನ ನಗರದ ಕಂಕರಬಾಗ್ನಲ್ಲಿ ನಿರ್ಮಿಸುತ್ತಿರುವ ಮನೆಗಾಗಿ ತನ್ನ ಸಹೋದರರಿಂದ ಈ ಹಣ ಪಡೆದಿದ್ದಾಗಿ ಮಾಜಿ ಶಾಸಕರೂ ಆಗಿರುವ ಪ್ರವೀಣ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.