ಗುವಾಹಟಿ, ಸೆ.7: ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ನ್ಯಾಯವಾದಿಯೊಬ್ಬರು ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾಗಿದ್ದ ಎನ್.ಶ್ರೀಧರ ರಾವ್ ಅವರಿಗೆ 5 ಕೋಟಿ ರೂ. ಲಂಚದ ಆಮಿಷವೊಡ್ಡಿದ್ದರೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.ಪ್ರಸ್ತುತ ಗುವಾಹಟಿ ಹೈಕೋರ್ಟ್ನ ಪ್ರಭಾರ ಮುಖ್ಯ ನ್ಯಾಯಾಧೀಶರಾಗಿರುವ ಶ್ರೀಧರ ರಾವ್ ಅವರ ಕಾರ್ಯವೈಖರಿಯನ್ನು ಖಂಡಿಸಿ, ಗುವಾಹಟಿ ಹೈಕೋರ್ಟ್ನ ಬಾರ್ ಅಸೋಸಿಯೇಶನ್ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಈ ವಿಷ ಯವನ್ನು ಬಹಿರಂಗ ಪಡಿಸಿದೆ.
ತಾನು ಹಾಗೂ ನ್ಯಾಯಮೂರ್ತಿ ಪಿ.ಕೆ. ಸೈಕಿಯಾ ನೇತೃ ತ್ವದ ವಿಭಾಗೀಯ ನ್ಯಾಯಪೀಠವು ಕೈಗೆತ್ತಿಕೊಂಡಿದ್ದ ರೋಸ್ವ್ಯಾಲಿ ಹೊಟೇಲ್ಸ್ ಆ್ಯಂಡ್ ಎಂಟರ್
ಟೈನ್ಮೆಂಟ್ ಲಿಮಿಟೆಡ್ ಹಾಗೂ ಅಸ್ಸಾಂ ಸರಕಾರ ಮತ್ತಿತರರ ನಡುವಿನ ಮೊಕದ್ದಮೆಯ ವಿಚಾರಣೆಗೆ ಸಂಬಂಧಿಸಿ ತನಗೆ ಈ ಬೃಹತ್ ಮೊತ್ತದ ಲಂಚದ ಆಮಿಷವನ್ನು ತನ್ನ ಪುತ್ರನ ಸ್ನೇಹಿತರಾದ ಕರ್ನಾಟಕ ಹೈಕೋರ್ಟ್ನ ನ್ಯಾಯವಾದಿ ಯೊಬ್ಬರು ಒಡ್ಡಿದ್ದರು. ಆದರೆ ತಾನದನ್ನು ತಿರಸ್ಕರಿಸಿದ್ದಾಗಿ ಶ್ರೀಧರ ರಾವ್ ಬಹಿ ರಂಗಪಡಿಸಿದ್ದಾರೆಂದು ಗುವಾಹಟಿ ಹೈಕೋರ್ಟ್ನ ಬಾರ್ ಅಸೋಸಿಯೇಶನ್ ತಿಳಿಸಿದೆ.
ಪ್ರಸ್ತುತ ಗುವಾಹಟಿ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿರುವ ಶ್ರೀಧರ ರಾವ್ ಅವರು ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿಯಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು ಪ್ರಧಾನ ಪೀಠಕ್ಕೆ ವರ್ಗಾಯಿಸಿರುವುದು. ಹಾಗೂ ಪಿಐಎಲ್ ಪ್ರಕರಣಗಳ ಇತ್ಯರ್ಥಕ್ಕೆ ಆಮಿಕಸ್ ಕ್ಯೂರಿ ಒಬ್ಬರನ್ನು ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಬಿಕ್ಕಟ್ಟನ್ನು ಬಗೆಹರಿಸಲು ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಶನ್ನ ನ್ಯಾಯವಾದಿಗಳು, ಈ ವರ್ಷದ ಆಗಸ್ಟ್ 15ರಂದು ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಶ್ರೀಧರ ರಾವ್ ಅವರೂ ಪಾಲ್ಗೊಂಡಿದ್ದರು.
ಸಭೆಯಲ್ಲಿ ನ್ಯಾಯಮೂರ್ತಿ ಶ್ರೀಧರ ರಾವ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಹ ಕೆಲವು ಆರೋಪಗಳು ಎದುರಾದಾಗ, ತನ್ನ ಪ್ರಾಮಾಣಿಕತೆಗೆ ನಿದರ್ಶನವಾಗಿ, ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದರೆಂದು ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಶನ್, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದೆ. ರೋಸ್ ವ್ಯಾಲಿ ಪ್ರಕರಣದ ತೀರ್ಪು ಈ ವರ್ಷದ ಜೂನ್ 25ರಂದು ಪ್ರಕಟಗೊಂಡಿದೆ. ಆದರೆ ಲಂಚದ ಆಮಿಷವೊಡ್ಡಿದ್ದರೆನ್ನಲಾದ ನ್ಯಾಯವಾದಿಯ ವಿರುದ್ಧ ನ್ಯಾಯಮೂರ್ತಿ ರಾವ್ ಈವರೆಗೆ ಯಾಕೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಗುವಾಹಟಿ ಬಾರ್ ಅಸೋಸಿಯೇಶನ್ ಪ್ರಶ್ನಿಸಿದೆ.
ರಾಷ್ಟ್ರೀಯ