ಹೈದರಾಬಾದ್, ಸೆ.7: ಆಂಧ್ರ ಪ್ರದೇಶದ ಹಲವೆಡೆಗಳಲ್ಲಿ ರವಿವಾರ ಮಿಂಚು-ಸಿಡಿಲಿನ ಆರ್ಭಟಕ್ಕೆ 20 ಜನರು ಸಾವನ್ನಪ್ಪಿದ್ದು,ಹಲವರು ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ 4 ಲ.ರೂ.ಪರಿಹಾರವನ್ನು ಘೋಷಿಸಿದೆ.
ಬಂಗಾಲ ಉಪಸಾಗರದಲ್ಲಿ ಪ್ರತಿಕೂಲ ಹವಾಮಾನದ ಪ್ರಭಾವದಿಂದಾಗಿ ಬರಪೀಡಿತ ಪ್ರಕಾಶಂ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು,ಸಿಡಿಲು ಬಡಿದು ಆರು ಜನರು ಮೃತಪಟ್ಟಿದ್ದಾರೆ. ಈ ಪೈಕಿ ತರ್ಲಪಾಡು ಮಂಡಲ ವ್ಯಾಪ್ತಿಯಲ್ಲಿ ಎರಡು,ಮರ್ರಿಪುಡಿ,ಪೊನ್ನಲೂರು ಮತ್ತು ಮಾರ್ಕಾಪುರ ಮಂಡಲ ವ್ಯಾಪ್ತಿಗಳಲ್ಲಿ ತಲಾ ಒಂದು ಸಾವು ಸಂಭವಿಸಿವೆ. ನೆಲ್ಲೂರು ಜಿಲ್ಲೆಯಲ್ಲಿ ಆರು ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಕೃಷ್ಣಾ ಜಿಲ್ಲೆಯಲ್ಲಿ ನಾಲ್ವರು,ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಹಾಗೂ ಅನಂತಪುರ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.
ತನ್ಮಧ್ಯೆ, ಗುಂಟೂರು ಜಿಲ್ಲೆಯ ಪೆರೆಚರ್ಲದಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಆಂಧ್ರ ಮತ್ತು ತ್ರಿಪುರಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಮೈದಾನದ ಹೊರಗಿನ ತಾಳೆಮರಕ್ಕೆ ಭಾರೀ ಸಿಡಿಲು ಬಡಿದಿದ್ದು, ಆಟಗಾರ್ತಿಯರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಘಟನೆಯ ಬಳಿಕ ಪಂದ್ಯವನ್ನು ರದ್ದುಗೊಳಿಸಲಾಯಿತು.
ರಾಷ್ಟ್ರೀಯ