ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದು, ತಾವು ಸಾಯುವ ಹಿಂದಿನ ದಿನ ಕುಟುಂಬದವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರೆಂದು ಹೇಳಲಾಗಿದೆ.
ಜುಲೈ 26 ರ ಸಂಜೆ ರಾಮೇಶ್ವರಂ ನಲ್ಲಿನ ತಮ್ಮ ಮನೆಗೆ ದೂರವಾಣಿ ಕರೆ ಮಾಡಿದ್ದ ಅಬ್ದುಲ್ ಕಲಾಂ ಅವರು, ತಮ್ಮ ಸಹೋದರ 99 ವರ್ಷದ ಮಹಮ್ಮದ್ ಮುತ್ತು ಮೀರ ಲೆಬ್ಬಾಯಿ ಮರೈಕರ್ ಅವರ ಆರೋಗ್ಯ ಕುರಿತು ವಿಚಾರಿಸಿದ್ದರೆನ್ನಲಾಗಿದೆ. ಕುಟುಂಬ ಸದಸ್ಯರ ಕ್ಷೇಮ ಸಮಾಚಾರ ಕೇಳಿದ ಕಲಾಂ, ತಾವು ಈಗ ಶಿಲ್ಲಾಂಗ್ ನಲ್ಲಿದ್ದು, ಇಲ್ಲಿ ತುಂಬಾ ಚಳಿಯಿದೆ ಎಂದು ಹೇಳಿದ್ದರೆಂದು ಮಹಮ್ಮದ್ ಮುತ್ತು ಮೀರ ಲೆಬ್ಬಾಯಿ ಮರೈಕರ್ ಅವರ ಮೊಮ್ಮಗ ಸಲೀಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಮಧ್ಯೆ ಅಬ್ಸುಲ್ ಕಲಾಂ ಅವರ ಅಂತ್ಯಕ್ರಿಯೆಯನ್ನು ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ರಾಮೇಶ್ವರಂ ನ ಪೆಕಾರಂಬು ಎಂಬಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದ್ದು, 2 ಎಕರೆ ವಿಶಾಲ ಪ್ರದೇಶವಾಗಿರುವ ಇಲ್ಲಿ ಮುಂದಿನ ದಿನಗಳಲ್ಲಿ ಸ್ಮಾರಕ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಇಂದು ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ರಾಮೇಶ್ವರಂ ಗೆ ಆಗಮಿಸುವ ನಿರೀಕ್ಷೆಯಿದೆ. ಕಲಾಂ ಅವರ ಗೌರವಾರ್ಥ ರಾಮೇಶ್ವರಂ ನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಮೀನುಗಾರರೂ ಸಮುದ್ರಕ್ಕೆ ಇಳಿದಿಲ್ಲವೆಂದು ತಿಳಿದುಬಂದಿದೆ.