ತಮಿಳುನಾಡು: ಸೋಮವಾರದಂದು ಶಿಲ್ಲಾಂಗ್ ನಲ್ಲಿ ನಿಧನರಾದ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ತಮಿಳುನಾಡಿನ ರಾಮೇಶ್ವರಂ ನಲ್ಲಿ ನಡೆಯುತ್ತಿದ್ದರೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪಾಲ್ಗೊಳ್ಳುತ್ತಿಲ್ಲವೆಂದು ತಿಳಿದುಬಂದಿದೆ.
ಜಯಲಲಿತಾರವರು ಆನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರಕ್ಕೆ ಗೈರು ಹಾಜರಾಗುತ್ತಿದ್ದಾರೆಂದು ಹೇಳಲಾಗಿದ್ದು, ಹಣಕಾಸು ಸಚಿವ ಪನ್ನೀರ್ ಸೆಲ್ವಂ ನೇತೃತ್ವದ ಸಚಿವರ ತಂಡ ರಾಮೇಶ್ವರಂ ಗೆ ತೆರಳಲಿದೆ ಎಂಬ ಮಾಹಿತಿ ಲಭಿಸಿದೆ.
ನಾಳೆ ನಡೆಯಲಿರುವ ಅಂತ್ಯಕ್ರಿಯೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಮೇಶ್ವರಂ ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇರಿದಂತೆ ಇನ್ನೂ ಹಲವು ಕೇಂದ್ರ ಸಚಿವರು ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗಿದೆ.
ನವದೆಹಲಿಯ ನಂ.10, ರಾಜಾಜಿ ಮಾರ್ಗದಲ್ಲಿರುವ ಕಲಾಂ ಅವರ ನಿವಾಸದಿಂದ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ತಮಿಳುನಾಡಿಗೆ ಹೊರಟಿದ್ದು, ರಾಮೇಶ್ವರಂ ನಲ್ಲಿ ಇಂದು ರಾತ್ರಿಯವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ನಾಳೆ ಕುಟುಂಬದವರು ಅಂತಿಮ ವಿಧಿ ವಿಧಾನ ನೆರವೇರಿಸಿದ ಬಳಿಕ 12 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.