ನೀಮಚ್ (ಮಧ್ಯಪ್ರದೇಶ): ಪಾಕಿಸ್ತಾನದೊಂದಿಗೆ ಶಾಂತಿಯುತ ಸಂಬಂಧ ಬಯಸುತ್ತೇವೆ, ಆದರೆ ನಮ್ಮ ಸಾರ್ವಭೌಮತೆಗೆ ಧಕ್ಕೆಯಾದರೆ ತಕ್ಕ ಉತ್ತರ ನೀಡಲು ಸಿದ್ಧ ಎಂದು ಹೇಳುವ ಮೂಲಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೆರೆ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಪಾಕಿಸ್ತಾನದ ಜತೆ ‘ಉತ್ತಮ ಬಾಂಧವ್ಯಕ್ಕೆ’ ಭಾರತ ಸಿದ್ಧವಾಗಿದ್ದರೂ ಗಡಿಯಾಚೆಗಿನ ಭಯೋತ್ಪಾದನೆ ಇನ್ನೂ ನಿಂತಿಲ್ಲ ಏಕೆಂಬುದು ಅರ್ಥವಾಗದ ವಿಷಯ ಎಂದು ಸಿಂಗ್ ಅವರು ಪಂಜಾಬ್ನ ಗುರುದಾಸಪುರದಲ್ಲಿ ಉಗ್ರಗಾಮಿಗಳ ದಾಳಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
“ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ನಾವೇ ಮೊದಲಾಗಿ ಆಕ್ರಮಣ ಮಾಡುವುದಿಲ್ಲ ಮತ್ತು ಗುಂಡಿನ ದಾಳಿಯೂ ಮಾಡುವುದಿಲ್ಲ. ಆದರೆ, ಸವಾಲೊಡ್ಡಿದರೆ, ಖಂಡಿತವಾಗಿಯೂ ತಕ್ಕ ಶಾಸ್ತಿ ಮಾಡಿ ಸದ್ದಡಗಿಸುತ್ತೇವೆ” ಎಂದು ರಾಜನಾಥ್ ಸಿಂಗ್ ಹೇಳಿದರು.