ಮುಂಬೈ: ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ ಮರಣದಂಡನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವೀಟ್ ಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಟ್ವೀಟ್ ನ್ನು ಹಿಂಪಡೆದಿರುವುದಾಗಿ ಸಲ್ಲು ಹೇಳಿದ್ದಾರೆ.
ನಾನು ಯಾವುದೇ ಒಂದು ಧರ್ಮಕ್ಕೆ ಬದ್ಧನಾದವನಲ್ಲ. ನಾನು ದೇಶದ ಎಲ್ಲಾ ಧರ್ಮದ ಜನರನ್ನು ಗೌರವಿಸುತ್ತೇನೆ. ಕಾನೂನಿನಲ್ಲಿ ಸಂಪೂರ್ಣ ನಂಬಿಕೆ ಇದೆ. ನಾನು ಟ್ವೀಟ್ ಮಾಡಿರುವುದು ತಪ್ಪಾಗಿದೆ. ನನ್ನ ತಂದೆಯ ಸಲಹೆಯಂತೆ ನನ್ನ ಟ್ವೀಟ್ ಹಿಂಪಡೆದುಕೊಳ್ಳುತ್ತಾ ದೇಶದ ಜನರಲ್ಲಿ ಬೇಷರತ್ ಕ್ಷಮೆ ಯಾಚಿಸುತ್ತೇನೆ’ ಎಂದು ಮರು ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಮುಂಬೈ ನಿವಾಸದ ಎದುರು ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ನಿರತರನ್ನು ತಡೆಯಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಯಾಕೂಬ್ ಮೆಮನ್ನ ಕೊರಳಿಗೆ ಕುಣಿಕೆ ಬಿಗಿಯಲು ಪೂರ್ವ ತಯಾರಿಗಳು ಭರದಿಂದ ನಡೆಯುತ್ತಿವೆ. ಜೈಲಿನ ಅಧಿಕಾರಿಗಳು ಯಾಕೂಬ್ನನ್ನು ಗಲ್ಲಿಗೇರಿಸುವ ಸಂಬಂಧ ರಿಹರ್ಸಲ್ಗಳನ್ನು ಮತ್ತು ಸತತ ಸಭೆಗಳನ್ನು ನಡೆಸತೊಡಗಿದ್ದಾರೆ.