ರಾಷ್ಟ್ರೀಯ

ಈ ಭಾಯಿಜಾನ್‌ಗಳು ಭಜರಂಗಿಯ ಭಕ್ತರು ಗೊತ್ತಾ?

Pinterest LinkedIn Tumblr

salman_khan_bajrangi_bhaija

ಸಾಂದರ್ಭಿಕ ಚಿತ್ರ

ವಡೋದರ: ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ ನಂತರ ಸೊಹೈಲ್ ಪಟೇಲ್ ತರ್ಸಾಲಿ ಬಳಿಯ ಹನುಮಾನ್ ದೇವಸ್ಥಾನಕ್ಕೆ ತೆರಳಿ ಹನುಮಾನ್ ಚಾಲೀಸಾ ಪಠಣ ಶುರು ಮಾಡುತ್ತಾರೆ.

ಇದು ಪ್ರತಿ ಶನಿವಾರ ಸಂಜೆ ಈ ಮಂದಿರದಲ್ಲಿ ಕಾಣಸಿಗುವ ದೃಶ್ಯ. ಅಷ್ಟು ಮಾತ್ರವಲ್ಲ, ಸೊಹೈಲ್‌ ಅವರ ಆಂಜನೇಯನ ಭಕ್ತಿ ಗಾಥೆಗೆ ಡಜನ್‌ಗೂ ಅಧಿಕ ಮುಸ್ಲಿಮರ ಸೇರಿಕೊಳ್ಳುತ್ತಾರೆ. ಅವರೆಲ್ಲರೂ ಹನುಮಂತನ ಸ್ತುತಿ ಮಾಡುವ ಭಜನೆಗಳನ್ನು ಹಾಡುತ್ತಾರೆ. ಇವರ ಭಕ್ತಿಗೆ ತಲೆದೂಗುತ್ತ ದೊಡ್ಡ ಸಂಖ್ಯೆಯಲ್ಲಿ ಹಿಂದು ಭಕ್ತರು ಕೂಡ ಸೇರಿಕೊಳ್ಳುತ್ತಾರೆ.

ಬೇರೆ ಊರಿಂದ ಬಂದವರಿಗೆ ಇದೊಂದು ಅಚ್ಚರಿಯಿಂದ ಹುಬ್ಬೇರಿಸುವ ಸಂಗತಿಯಾದರೆ, ತರ್ಸಾಲಿಯ ಮಂದಿಗೆ ಇದು ಸಾಮಾನ್ಯ ದೃಶ್ಯವಾಗಿದೆ.

ತರ್ಸಾಲಿ ಎಂಬ ಪುಟ್ಟ ಊರಿನ ಮುಸ್ಲಿಮರಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಹನುಮಂತನ ಭಕ್ತರಿದ್ದಾರೆ. ಅವರು ಕೇವಲ ಹನುಮಾನ್‌ ಜಯಂತಿ ಸಂದರ್ಭದಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ಮಾತ್ರ ಹಿಂದು ಭಕ್ತರೊಂದಿಗೆ ಕೈಜೋಡಿಸುವುದಿಲ್ಲ. ಪ್ರತಿ ಶನಿವಾರ ಅವರು ಹನುಮನ ಪ್ರಾರ್ಥನೆಯನ್ನು ಮಾಡಿ ಭಜಿಸುತ್ತಾರೆ. ನಾಟಕೀಯವಾಗಿ ನಾನಾ ಕಾರಣಗಳಿಗೆ ಕೋಮುಗಲಭೆಗಳು ಭುಗಿಲೇಳುವ ನಗರದಲ್ಲಿ ಇದೊಂದು ವಿಸ್ಮಯದ ವಿಷಯವಾಗಿ ಉಳಿದಿದೆ.

“ನಾನು ಕಳೆದ ಕೆಲವು ವರ್ಷಗಳಿಂದ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತ ಬಂದಿದ್ದೇನೆ. ನಾನಿಲ್ಲಿ ಹನುಮಾನ್ ಚಾಲೀಸಾ ಕಲಿತು, ಭಜನೆಗಳನ್ನು ಮಾಡಲಾರಂಭಿಸ ಮೇಲೆ ನನಗೆ ಬಹಳ ಅನುಕೂಲವಾಗಿದೆ. ಮಸೀದಿಯಲ್ಲಿ ನಮಾಜ್‌ ಮಾಡಿದ ಬಳಿಕ, ನಾನು ದೇಗುಲಕ್ಕೆ ಭೇಟಿ ನೀಡಿ ಭಜನೆಗಳನ್ನು ಹಾಡುವುದನ್ನು ರೂಢಿಸಿಕೊಂಡಿದ್ದೇನೆ ಎಂದು 20 ವರ್ಷದ ಸೊಹೈಲ್ ಹೇಳುತ್ತಾರೆ.

ಎಂಟು ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸುವಾಗ ಶ್ರೀ ಮಾರುತಿ ಮಂಡಳಿ ಎಂಬ ಟ್ರಸ್ಟ್ ಹುಟ್ಟುಹಾಕಲಾಗಿತ್ತು. ಅದರಲ್ಲಿ ಹಿಂದು, ಮುಸ್ಲಿಂ ಎಲ್ಲರೂ ಇದ್ದರು. ಎರಡೂ ಸಮುದಾಯದವರು ದೇಗುಲ ನಿರ್ಮಾಣಕ್ಕೆ ಉದಾರ ಸಹಾಯ ಮಾಡಿದ್ದರು. ಈಗ ಈ ದೇವಸ್ಥಾನದ 3000 ಸದಸ್ಯರಲ್ಲಿ 500 ಮಂದಿ ಮುಸ್ಲಿಮರಿದ್ದಾರೆ.

25 ವರ್ಷದ ಮೆಮನ್ ತುಫೈಲ್ ಮತ್ತು 21ರ ಹರೆಯದ ರಾಜು ಅಬ್ಬಾಸ್‌ ಕೂಡ ಮಾರುತಿಯ ಭಜನೆಗಳು ಕಲಿತಿದ್ಧಾರೆ. ಹನುಮಂತನಿಗೆ ಪ್ರಾರ್ಥನೆ ಮಾಡುವುದರಿಂದ ನಮಗೆ ಆಧ್ಯಾತ್ಮಿಕ ತೃಪ್ತಿ ಮತ್ತು ಶಕ್ತಿ ಸಿಗುತ್ತದೆ. ಎರಡೂ ಧರ್ಮಗಳ ದೇವರನ್ನು ಪೂಜಿಸಲು ನಮಗೆ ಸಂತಸವಾಗುತ್ತದೆ. ಇದು ನಮಗೆ ಸಾಮಾರಸ್ಯ ಮತ್ತು ಏಕತೆಯನ್ನು ಬೋಧಿಸುತ್ತದೆ ಎನ್ನುತ್ತಾರೆ ಅವರಿಬ್ಬರೂ. ಇದಲ್ಲದೆ ಅಬ್ಬಾಸ್‌ ಅವರು ಭಕ್ತರಿಗೆ ಹನುಮಂತನ ನಾನಾ ಕತೆಗಳನ್ನು ಹೇಳುತ್ತಾರೆ.

ಆಂಜನೇಯನ ದೇವಸ್ಥಾನ ತರ್ಸಾಲಿ ಸರೋವರದ ದಂಡೆಯಲ್ಲಿದ್ದು, ಇಲ್ಲಿನ 96 ಕಾರ್ಯದರ್ಶಿಗಳ ಪೈಕಿ 20 ಮಂದಿ ಮುಸ್ಲಿಮರು.

Write A Comment