ರಾಷ್ಟ್ರೀಯ

ದಿಗ್ವಿಜಯ್ ಹುಟ್ಟು ಪಿತೂರಿಗಾರ: ಮ.ಪ್ರ. ಸಿಎಂ ಚೌಹಾಣ್

Pinterest LinkedIn Tumblr

shivraj-singh-chouhan-2ಅಲಿರಾಜಪುರ್‌ (ಮ.ಪ್ರ.): ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರನ್ನು ‘ಹುಟ್ಟು ಪಿತೂರಿಗಾರ’ ಎಂದು ಜರೆದಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ‘ಈ ಕಾಂಗ್ರೆಸ್ಸಿಗ ಸಮಯ ಸಾಧಕ’ ಎಂದು ಆರೋಪಿಸಿದ್ದಾರೆ.

ಮಧ್ಯ ಪ್ರದೇಶ ಸರಕಾರಕ್ಕೆ ಕಂಟಕ ಪ್ರಾಯವಾಗಿರುವ ವ್ಯಾಪಂ ಹಗರಣವನ್ನು ಸಿಬಿಐಗೆ ವಹಿಸಿದ ನಂತರ ಇದೇ ಮೊದಲ ಬಾರಿಗೆ, ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಜನ್ಮಸ್ಥಳ ಭಾಭ್ರಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ, ಚೌಹಾಣ್ ಮಾತನಾಡಿದರು.

ಹಿಂದಿನ ರಾಜ ಮನೆತನಗಳಿಗೆ ಸೇರಿದ ದಿಗ್ವಿಜಯ್ ಮತ್ತು ಇತರರಿಗೆ ಟಾಂಗ್ ನೀಡಿದ ಚೌಹಾಣ್, ‘ರೈತನ ಮಗನೊಬ್ಬ ಮುಖ್ಯಮಂತ್ರಿ ಆಗಿರುವುದನ್ನು ಅವರೆಲ್ಲರಿಗೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ,’ ಎಂದರು.

‘ಕಾಂಗ್ರೆಸ್ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದೆ. ನಾನು ರಾಜೀನಾಮೆ ನೀಡಲೇ? ನಿಮಗೆ ನನ್ನ ಮೇಲೆ ನಂಬಿಕೆ ಇದೆಯೇ?,’ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.

‘ಬೇಡ’ ಎಂದು ಉತ್ತರಿಸಿದ ಜನರ ಉತ್ಸಾಹಕ್ಕೆ ಉಬ್ಬಿ ಹೋದ ಚೌಹಾಣ್, ‘ಜನರ ಸಹಕಾರದಿಂದಲೇ ಕಾಂಗ್ರೆಸ್‌ನ ತಪ್ಪನ್ನು ಬಟಾಬಯಲು ಮಾಡುತ್ತೇನೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Write A Comment