ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ, ಮುಂಚೂಣಿಯಲ್ಲಿರುವ ಸುಖೋಯಿ ಯುದ್ಧ ವಿಮಾನ ಸೇರಿದಂತೆ ಭಾರತೀಯ ವಾಯುಪಡೆಯ ಒಟ್ಟು 20 ವಿಮಾನಗಳು ಪತನಗೊಂಡಿವೆ.
ಲೋಕಸಭೆಯಲ್ಲಿ ಲಿಖಿತ ಹೇಳಿಕೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ‘ಯುದ್ಧವಿಮಾನ ಅವಘಡದಲ್ಲಿ ಇಬ್ಬರು ಐಎಎಫ್ ಸಿಬ್ಬಂದಿ ಮೃತಪಟ್ಟರೆ, ಹಲವು ನಾಗರಿಕರು ಗಾಯಗೊಂಡಿದ್ದಾರೆ,’ ಎಂದು ತಿಳಿಸಿದ್ದಾರೆ.
‘2013-14ರಲ್ಲಿ ಒಂದು ಜಾಗ್ವಾರ್ ಮತ್ತು ಐದು ಮಿಗ್ ಸೇರಿ ಒಟ್ಟು ಆರು ಅವಘಡಗಳು ಸಂಭವಿಸಿದರೆ, 2012-13ರ ಅವಧಿಯಲ್ಲಿ ಒಂದು ಸುಖೋಯಿ ಹಾಗೂ ಎರಡು ಮಿಗ್ ಮತ್ತು ಜಾಗ್ವಾರ್ ಡಿಕ್ಕಿ ಹೊಡೆದಿವೆ. ಈ ಎಲ್ಲ ಅವಘಡಗಳಿಗೂ ತಾಂತ್ರಿಕ ಹಾಗೂ ಮಾನವ ತಪ್ಪುಗಳೇ ಕಾರಣ,’ ಎಂದು ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ.
‘ಯುದ್ಧ ವಿಮಾನಗಳ ಅವಘಡದಿಂದ ಸರಕಾರಕ್ಕೆ ಸುಮಾರು 386 ಕೋಟಿ ರೂ. ನಷ್ಟವಾಗಿದ್ದು, ಸಾರ್ವಜನಿಕ ಆಸ್ತಿ ಹಾನಿಯ ಮೌಲ್ಯ 4.43 ಲಕ್ಷವೆಂದು ಅಂದಾಜಿಸಲಾಗಿದೆ,’ ಎಂದಿದ್ದಾರೆ.